ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಇಂದು ಬೆಳಿಗ್ಗೆ ಒಂದೇ ದಿನದಲ್ಲಿ ಮೂವರು ಬಲಿಯಾಗಿದ್ದಾರೆ. ಜಲ್ಲೆಯಲ್ಲಿ 40 ದಿನಗಳಲ್ಲಿ 21 ಮಂದಿ ಹೃದಯಾಘಾತದಿಂದ ಸಾವು ಸಂಭವಿಸುವ ಪ್ರಕರಣಗಳು ನಡೆದಿವೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಲೋಹಿತ್ (38) ಎಂಬ ಭಾರತೀಯ ಸೇನೆಯ ಯೋಧ ರಜೆಗೆಂದು ಊರಿಗೆ ಬಂದಿದ್ದ ವೇಳೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಲೋಹಿತ್ 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ಮುಂದಿನ ವರ್ಷ ನಿವೃತ್ತಿಗೊಳ್ಳಬೇಕಿತ್ತು. ಜುಲೈ 3ರಂದು ಅವರು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಬೇಲೂರು ಪಟ್ಟಣದ, ಜೆಪಿನಗರದಲ್ಲಿ ವಾಸವಾಗಿದ್ದ ಲೇಪಾಕ್ಷಿ (50) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗೃಹಿಣಿಯಾಗಿದ್ದ ಲೇಪಾಕ್ಷಿ ಬೆಳಿಗ್ಗೆ ಮನೆಯಲ್ಲಿದ್ದಾಗ ಸುಸ್ತು ಎಂದು ಹೇಳಿದ್ದರು. ಕೂಡಲೇ ಲೇಪಾಕ್ಷಿ ಅವರನ್ನು ಬೇಲೂರಿನ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಹೃದಯಾಘಾತದಿಂದ ಲೇಪಾಕ್ಷಿ ಮೃತಪಟ್ಟಿದ್ದರು. ಹೊಳೆನರಸೀಪುರದ ಮಹಿಳೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಮುತ್ತಯ್ಯ (58) ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ.