ಸರಣಿ ಅಪಘಾತ, ಮೂವರು ಸಾವು

ಅಥಣಿ: ಅಥಣಿ ಹೊರವಲಯದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ರೀತಿಯಲ್ಲಿ ಗಾಯಗೊಂಡ ದಾರುಣ ಘಟನೆ ನಡೆದಿದೆ.
ಅಥಣಿ ಹೊರವಲಯದ ಬಣಜವಾಡ ಕಾಲೇಜ್ ಹತ್ತಿರ ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಗಣೇಶವಾಡಿ ಗ್ರಾಮದ ಮಹೇಶ್ ಸುಭಾಷ್ ಗಾತಾಡೆ(30), ಶಿರೋಳ ತಾಲೂಕಿನ ಪುಡವಾಡ ಗ್ರಾಮದ ಶಿವಂ ಯುವರಾಜ್ ಚೌಹಾನ್(24) ಹಾಗೂ ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಮಿರಜ್ ತಾಲೂಕಿನ ಕವಲಾಪುರ ಗ್ರಾಮದ ಸಚಿನ್ ವಿಲಾಸ್ ಮಾಳಿ(42) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಲ್ಕು ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು ಒಂದು ಬೃಹತ್ ಲಾರಿ, ಪಿಕಪ್ ವಾಹನ, ಇನ್ನೋವಾ, ಸ್ಕಾರ್ಪಿಯೋ ನಡುವೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.
ರಕ್ಷಿಸಲು ಬಂದವರೇ ಸಾವು:
ಕಾಗವಾಡ ಕಡೆಯಿಂದ ಕೆಂಪು ಇಟ್ಟಿಗೆ ತುಂಬಿಕೊಂಡು ಬೃಹತ್ ಲಾರಿಯಲ್ಲಿ ಅಥಣಿ ಕಡೆ ಬರುತ್ತಿರುವಾಗ ಅಥಣಿಯಿಂದ ಕಾಗವಾಡಕ್ಕೆ ಬರುತ್ತಿರುವ ಪಿಕಪ್ ವಾಹನ ನಡುವೆ ಅಪಘಾತ ಸಂಭವಿಸಿದೆ. ಎರಡೂ ವಾಹನಗಳು ರಸ್ತೆ ಪಕ್ಕದಲ್ಲಿ ನೆಲಕಚ್ಚಿ ಪಿಕಪ್ ವಾಹನದಲ್ಲಿ ಚಲಾಯಿಸುತ್ತಿದ್ದ ಚಾಲಕ ಮತ್ತು ಕ್ಲೀನರ್ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಇದನ್ನು ಗಮನಿಸಿದ ಸ್ಕಾರ್ಪಿಯೋ ವಾಹನ ಚಾಲಕ ತನ್ನ ವಾಹನ ಸೈಡಿಗೆ ಹಾಕಿ ಅವರನ್ನು ರಕ್ಷಿಸಲು ಮುಂದಾದಾಗ ಅಥಣಿ ಕಡೆಯಿಂದ ಬಂದ ಇನ್ನೋವಾ ಕಾರು ನೇರವಾಗಿ ರಕ್ಷಿಸಲು ಬಂದವನಿಗೆ ಹೊಡೆಯುತ್ತಿದ್ದಂತೆ ಸ್ಕಾರ್ಪಿಯೋ ವಾಹನ ಚಾಲಕ ಹಾಗೂ ಇನ್ನೋವಾದಲ್ಲಿದ್ದ ಇಬ್ಬರು ಸೇರಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ಮೊದಲು ಅಪಘಾತವಾಗಿರುವ ಟ್ರಕ್ ಹಾಗೂ ಪಿಕಪ್ ವಾಹನದ ಚಾಲಕ ಕ್ಲೀನರ್ ಗಾಯಾಳುಗಳಾಗಿದ್ದು ಅವರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ. ಯಾವ ರೀತಿ ಅಪಘಾತವಾಗಿದೆ ಎಂಬುದರ ಬಗ್ಗೆ ಅಥಣಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತನಿಖೆಯಿಂದಷ್ಟೇ ಸಂಪೂರ್ಣ ಸತ್ಯಾಂಶ ಹೊರಬರಬೇಕಾಗಿದೆ.