ಚಳ್ಳಕೆರೆ: ಶಿಕ್ಷಕನೇ ನಿಜವಾದ ರಾಷ್ಟ್ರ ನಿರ್ಮಾಪಕ ಎಂದು ಗದಗ-ವಿಜಯಪುರದ ಶ್ರೀರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಎನ್. ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ “ಶಿಕ್ಷಕನೇ ರಾಷ್ಟ್ರ ನಿರ್ಮಾಪಕ” ಎಂಬ ವಿಷಯವಾಗಿ ಉಪನ್ಯಾಸ ನೀಡಿದ ಸ್ವಾಮಿ ನಿರ್ಭಯಾನಂದ ಸರಸ್ವತಿ, “ವಿದ್ಯೆ ಎನ್ನುವುದು ಕೇವಲ ಪಠ್ಯಪುಸ್ತಕದ ಜ್ಞಾನ ಮಾತ್ರವಲ್ಲ. ಅದು ವಿದ್ಯಾರ್ಥಿಗಳಿಗೆ ಸಾಮರ್ಥ್ಯಗಳನ್ನು ಕಲಿಸಿಕೊಡುವುದರ ಜೊತೆಗೆ ಸದ್ಗುಣಗಳನ್ನು ಬೆಳೆಸಬೇಕು,” ಎಂದು ಹೇಳಿದರು.
ಅವರು ಶಿಕ್ಷಕರಿಗೆ ಕಿವಿಮಾತು ಹೇಳುತ್ತಾ, “ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು. ತಾನು ಬೋಧಿಸುವ ವಿಷಯವನ್ನು ಮತ್ತು ವಿದ್ಯಾರ್ಥಿಗಳನ್ನು ಪ್ರೀತಿಸುತ್ತಾ, ಕುತೂಹಲಭರಿತವಾಗಿ ಪಾಠ ಮಾಡಿ, ಅವರಲ್ಲಿ ಉನ್ನತ ಚಿಂತನೆಗಳನ್ನು ತುಂಬಿ ಸಮರ್ಥ ರಾಷ್ಟ್ರ ಕಟ್ಟುವ ನಿರ್ಮಾಪಕನಾಗಿ ಸೇವೆ ಸಲ್ಲಿಸುವ ಪಣ ತೊಡಬೇಕು,” ಎಂದು ಕರೆ ನೀಡಿದರು.
ಈ ಉಪನ್ಯಾಸದ ಆರಂಭದಲ್ಲಿ, ನವಲಗುಂದದ ಶ್ರೀ ಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರು ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಚಳ್ಳಕೆರೆಯ ಶ್ರೀ ಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಡಿ.ಆರ್. ಪ್ರಮೀಳಾ, ಹಿರಿಯ ಉಪನ್ಯಾಸಕರಾದ ಕೆ.ಬಿ. ರವಿಕುಮಾರ್, ನಾಗೇಶ್ವರರಾವ್, ಯತೀಶ್ ಎಂ. ಸಿದ್ದಾಪುರ, ಶಿವಯೋಗಿ, ನಾಗೇಶ್, ವಿಶ್ವನಾಥ, ವಾಣಿಶ್ರೀ, ಶ್ಯಾಮಸುಂದರ್, ಬಸವರಾಜಪ್ಪ, ಯಶ್ವಂತ್, ಚೇತನ್, ಮಹೇಶ್, ಅಶ್ವಿನಿ, ರಮ್ಯ, ನಂದಿನಿ, ಮಹಾಲಕ್ಷ್ಮೀ ಸೇರಿದಂತೆ ಹಲವು ಶಿಕ್ಷಕರು, ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.