ರೈಲ್ವೆ: ಶತಮಾನಕ್ಕೆ ಬೇಕಾದಷ್ಟು ಕೆಲಸ ೧೦ ವರ್ಷದಲ್ಲಿ ಆಗಿವೆ

ಬಾಗಲಕೋಟೆಯಿಂದ ಶೀಘ್ರದಲ್ಲೇ ವಂದೇ ಭಾರತ ರೈಲು

ಬಾಗಲಕೋಟೆ: ಮುಂದಿನ ಒಂದು ಶತಮಾನಕ್ಕೆ ಬೇಕಾದಷ್ಟು ರೈಲ್ವೆ ಮೂಲಸೌಕರ್ಯ, ಆಧುನೀಕರಣದ ಕೆಲಸಗಳು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ೧೦ ವರ್ಷದ ಅವಧಿಯಲ್ಲಿ ಆಗಿವೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಅಮೃತ ಭಾರತ ನಿಲ್ದಾಣ ಯೋಜನೆಯಡಿ ನವೀಕರಣಗೊಂಡಿರುವ ನಗರ ರೈಲು ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಭಾಗಿ ಆಗಿ ಅವರು ಮಾತನಾಡಿದರು.

ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ೨೦೨೭ಕ್ಕೆ ಪೂರ್ಣಗೊಳ್ಳಲಿದೆ. ಗದಗ-ಹುಟಗಿ ಡಬ್ಲಿಂಗ್ ಕಾಮಗಾರಿ ವೇಗದಲ್ಲಿ ಸಾಗಿದೆ. ಆಲಮಟ್ಟಿ- ಚಿತ್ರದುರ್ಗ ಹೊಸ ಮಾರ್ಗಕ್ಕೆ ಡಿಪಿಆರ್ ಸಿದ್ಧತವಾಗುತ್ತಿದೆ, ಸ್ವಾತಂತ್ರ್ಯ ನಂತರ ಯಾವ ಸರ್ಕಾರಗಳೂ ಮಾಡದಷ್ಟು ಕೆಲಸವನ್ನು ‌ಮೋದಿ ಸರ್ಕಾರ ಮಾಡುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಗೊಂಡಂತೆ, ಮೋದಿ ಅವರ ಕಾಲದಲ್ಲಿ ರೈಲ್ವೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ, ಬಾಗಲಕೋಟೆಯಿಂದ ಶೀಘ್ರವೇ ವಂದೇ ಭಾರತ ರೈಲು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಸಂಸದರಾದ ಪಿ.ಸಿ.ಗದ್ದಿಗೌಡರ, ಗೋವಿಂದ ಕಾರಜೋಳ, ಮಾಜಿ ಸಚಿವ ಮುರುಗೇಶ ನಿರಾಣಿ, ಶಾಸಕರಾದ ಸಿದ್ದು ಸವದಿ, ಹಣಮಂತ ನಿರಾಣಿ, ಪಿ.ಎಚ್.ಪೂಜಾರ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿಪಂ ಸಿಇಒ ಶಶಿಧರ ಕುರೇರ, ಎಸ್ಪಿ ವೈ.ಅಮರನಾಥ ರೆಡ್ಡಿ ಮತ್ತಿತರರು ಇದ್ದರು