ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

ಶ್ರೀರಂಗಪಟ್ಟಣ: ಯುವಕನೋರ್ವ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ ಘಟನೆ ಪಟ್ಟಣದ ಪಶ್ಚಿಮವಾಹಿನಿ ಬಳಿಯ ರೈಲ್ವೆ ಹಳಿ ಮೇಲೆ ನಡೆದಿದೆ.
ತಾಲೂಕಿನ ಅರಕೆರೆ ಗ್ರಾಮದ ಆಕಾಶ್ (24) ಆತ್ಮಹತ್ಯೆಗೆ ಶರಣಾದ ಯುವಕ ಎಂದು ತಿಳಿದು ಬಂದಿದ್ದು, ಈತ ಮೈಸೂರಿನಲ್ಲಿ ರೂಂ ಮಾಡಿಕೊಂಡು ಫೋರಂ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಕಳೆದ 2-3 ದಿನಗಳಿಂದ ಮನೆಯಿಂದ ನಾಪತ್ತೆ ಆಗಿದ್ದು, ಶನಿವಾರ ಬೆಳಿಗ್ಗೆ ಪಟ್ಟಣದ ಪಶ್ಚಿಮವಾಹಿನಿ ಗೇಟ್ ಬಳಿಯ ರೈಲ್ವೆ ಹಳಿ ಮೇಲೆ ಮೃತದೇಹ ದೊರೆತಿದೆ. ಈತನ ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಈ ಸಂಬಂಧ ರೈಲ್ವೆ ಇಲಾಖೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೈಸೂರಿನ ಕೆಆರ್‌ಎಸ್ ಆಸ್ಪತ್ರೆಗೆ ಮೃತ ದೇಹವನ್ನು ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.