ವಿಜಯಪುರ: ಕಾರು, ಕಂಟೇನರ್, ಖಾಸಗಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ಸ್ಕಾರ್ಪಿಯೋದಲ್ಲಿದ್ದ ನಾಲ್ವರು ಹಾಗೂ ಖಾಸಗಿ ಬಸ್ನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಹಿಂದ್ರಾ ಸ್ಕಾರ್ಪಿಯೋದಲ್ಲಿ ಇದ್ದ ತೆಲಂಗಾಣದ ಗಡವಾಲದ ಕೆನರಾ ಬ್ಯಾಂಕ್ ಮ್ಯಾನೇಜರ್ ಟಿ.ಭಾಸ್ಕರನ್ ಹಾಗೂ ಅವರ ಪತ್ನಿ ಪವಿತ್ರಾ, ಮಗಳು ಜೋಸ್ನಾ, ಮಹೀಂದ್ರಾ ಸ್ಕಾರ್ಪಿಯೋ ಚಾಲಕ ವಿಜಯಪುರ ಜಿಲ್ಲೆಯ ಹೊರ್ತಿಯ ವಿಕಾಸ ಶಿವಪ್ಪ ಮಕನಿ ಹಾಗೂ ವಿಆರ್ಎಲ್ ಬಸ್ ಚಾಲಕ ಕಲಗುಟಗಿ ತಾಂಡಾದ ಬಸವರಾಜ ರಾಠೋಡ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಭಾಸ್ಕರನ್ ಅವರ ಪುತ್ರ ಪ್ರವೀಣತೇಜ ಹಾಗೂ ಲಾರಿ ಚಾಲಕ ಹುಲಜಂತಿಯ ಚನ್ನಬಸು ಸಿದ್ದಪ್ಪ ಮಾಳಿ ಗಾಯಗೊಂಡಿದ್ದು, ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮನಗೂಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.