ನೇಹಾ ಹತ್ಯೆ ಪ್ರಕರಣದ ತನಿಖೆ ದಾರಿ ತಪ್ಪಿದೆ

Advertisement

ಹುಬ್ಬಳ್ಳಿ: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ತನಿಖೆ ದಾರಿತಪ್ಪಿದೆ. ರಾಜ್ಯ ಸರ್ಕಾರಕ್ಕೆ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲದಿದ್ದರೆ, ಈಗಲೂ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ನಿರಂಜನ ಹಿರೇಮಠ ಅವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿರಂಜನ್ ಹಿರೇಮಠ ಅವರ ಕುಟುಂಬಕ್ಕೂ ನಮಗೂ ಬಹಳ ಹಳೆಯ ಸಂಬಂಧವಿದೆ. ಕಮಡೊಳ್ಳಿಯಲ್ಲಿ ನಿರಂಜನ ಹಿರಿಯರು ನಮ್ಮ ಕುಟುಂಬದ ಗುರುಗಳು. ನೇಹಾ ಹತ್ಯೆ ಬಹಳ ಆಘಾತದ ಸಂಗತಿ. ಅಮಾಯಕ ಹೆಣ್ಣು ಮಗುವನ್ನು ಕ್ರೂರವಾಗಿ ಕೊಲೆ ಮಾಡಿರುವುದು ಎಲ್ಲರೂ ತಲೆತಗ್ಗಿಸುವಂತಹ ವಿಚಾರ. ಕಾಂಗ್ರೆಸ್‌ನವರು ಇಡೀ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದರು. ಈ ಷಡ್ಯಂತ್ರದ ಹಿಂದೆ ಬಹಳಷ್ಟು ಜನ ಇದ್ದಾರೆ ಎಂದು ನೇಹಾ ತಂದೆ ತಾಯಿ ಹೇಳುತ್ತಿದ್ದಾರೆ. ಸಮಗ್ರ ತನಿಖೆಯಾಗಬೇಕಾದರೆ ಸಿಬಿಐಗೆ ಕೊಡಬೇಕು ಎನ್ನುವುದು ಕುಟುಂಬಸ್ಥರ ಆಗ್ರಹ. ಆದರೆ, ರಾಜ್ಯ ಸರ್ಕಾರ ಸಿಐಡಿಗೆ ಕೊಟ್ಟು ಕೈ ತೊಳೆದುಕೊಳ್ಳುವ ಕೆಲಸ ಮಾಡಿದೆ. ಈ ಪ್ರಕರಣದಲ್ಲಿ ಏನನ್ನೂ ಮುಚ್ಚಿಡಬಾರದು, ಯಾರನ್ನೂ ರಕ್ಷಿಸಬಾರದು ಅನ್ನುವ ಮನೋಭಾವ ರಾಜ್ಯ ಸರ್ಕಾರಕ್ಕೆ ಇದ್ದರೆ ಪ್ರಕರಣವನ್ನು ಕೂಡಲೇ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ ಪ್ರತಿಪಕ್ಷ ರಾಜಕಾರಣ ಮಾಡುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ತಿರುಗೇಟು ನೀಡಿದ ಅವರು, ಕಾಲೇಜ್ ಕ್ಯಾಂಪಸ್‌ನಲ್ಲಿ ಕೊಲೆ ನಡೆದರೆ ವಿರೋಧ ಪಕ್ಷ ಸುಮ್ಮನೆ ಕುಳಿತುಕೊಳ್ಳಬೇಕು ಅಂತ ಸಿಎಂ ನಿರೀಕ್ಷೆ ಮಾಡುತ್ತಾರಾ? ಅವರು ವಿರೋಧ ಪಕ್ಷದಲ್ಲಿದ್ದರೆ ಸುಮ್ಮನೆ ಕೂತಿರುತ್ತಿದ್ದರಾ? ಇಡೀ ಕರ್ನಾಟಕ ಹೌಹಾರಿದೆ ಮಠಾಧೀಶರು ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಅವರೇನು ರಾಜಕೀಯ ಮಾಡುತ್ತಿದ್ದಾರಾ ಎಂದು ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಪೊಲಿಸರು ಅರೋಪಿಯನ್ನು ಬಂಧಿಸಿ ವಿಚಾರಣೆಗೆ ತಮ್ಮ ವಶಕ್ಕೆ ಪಡೆಯದೇ ನ್ಯಾಯಾಂಗ ಬಂಧನಕ್ಕ ಒಪ್ಪಿಸಿರುವುದು, ಈ ಪ್ರಕರಣ ದಾರಿ ತಪ್ಪಿದೆ. ಇದರ ಹಿಂದೆ ಇನ್ನೂ ಯಾರಿದ್ದಾರೆ ಎಂದು ನೇಹಾ ತಂದೆ ಪೊಲಿಸರಿಗೆ ಮಾಹಿತಿ ನೀಡಿದ್ದರೂ ಅವರನ್ನು ಬಂಧಿಸಿ ವಿಚಾರಣೆ ಮಾಡಿಲ್ಲ, ಅನೇಕರು ಫೋನ್‌ನಲ್ಲಿ ಮಾತನಾಡಿದ್ದಾರೆ. ಅದೆಲ್ಲವೂ ತನಿಖೆಯಾಗಬೇಕು. ಈ ಪ್ರಕರಣಕ್ಕೆ ರಾಜಕೀಯ ಲೇಪ ಬಂದಿರುವುದು ಕಾಂಗ್ರೆಸ್‌ನವರ ಮಾತುಗಳಿಂದ ಈಗಲೂ ಕಾಲ ಮಿಂಚಿಲ್ಲ, ಸಿಬಿಐಗೆ ಕೊಟ್ಟರೆ ನ್ಯಾಯ ಸಿಗುತ್ತದೆ ಅನ್ನುವ ವಿಶ್ವಾಸ ನಮಗಿದೆ ಎಂದರು.