ಡಿಕೆಶಿ ರಾತ್ರಿ 2 ಗಂಟೆಗೆ ಹನಿಟ್ರ್ಯಾಪ್ ಸಭೆ ಮಾಡುತ್ತಾರೆ

ಬೆಂಗಳೂರು: ನನ್ನ ಮೇಲೆ ಸಿಬಿಐ ತನಿಖೆ ಮಾಡಿಸಿ ನನ್ನ ಮೇಲೆ ಸುಳ್ಳು ರೇಪ್ ಕೇಸ್ ಹಾಕಿಸಿದ್ದು ಡಿಕೆ ಶಿವಕುಮಾರ್, ಅವರು ರಾತ್ರಿ ೨ ಗಂಟೆಗೆ ಹನಿಟ್ರ್ಯಾಪ್ ಟೀಂ ಜೊತೆ ಸಭೆ ಮಾಡ್ತಾರೆ ಎಂದು ಶಾಸಕ ಮುನಿರತ್ನ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಕಮೀಷನರ್‌ಗೆ ಹೇಳಿ ಡಿಸಿಎಂ ಡಿ.ಕೆ.ಶಿವಕುಮಾರ್, ನನ್ನ ಮೇಲೆ ರೇಪ್ ಕೇಸ್ ಹಾಕಿಸಿದ್ದರು. ಅಟ್ರಾಸಿಟಿ ಕೇಸಲ್ಲಿ ಕೋರ್ಟ್‌ಗೆ ಹೋಗಿದ್ದಾಗ ರಾಜೀನಾಮೆ ಕೊಟ್ಟರೆ ರೇಪ್ ಕೇಸ್ ಹಾಕಲ್ಲ ಎಂದು ಡಿವೈಎಸ್‌ಪಿ ಧರ್ಮೇಂದ್ರ ನೇರವಾಗಿ ಈ ಮಾತನ್ನು ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಸೇರಿ ನನ್ನ ಮೇಲೆ ಸಿಬಿಐ ತನಿಖೆ ಮಾಡಿಸಿ ರೇಪ್ ಕೇಸ್ ಹಾಕಿಸಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದರು.
ನಾನು ರೇಪ್ ಮಾಡಿದ್ರೆ ಸರ್ವನಾಶ ಆಗ್ತೀನಿ: ನನಗೆ ಮೊಟ್ಟೆ ಹೊಡೆಯಲು, ಮಸಿ ಬಳಿಯಲು ಹೀಗೆ ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ನಂತರ ಈ ರೀತಿ ಟಾರ್ಗೆಟ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ, ರೇವಣ್ಣ, ಸೂರಜ್ ರೇವಣ್ಣ ಎಲ್ಲಾ ಆಯ್ತು ಈಗ ರಾಜಣ್ಣ ಮೇಲೆ ಡಿಕೆಶಿ ಆರೋಪ ಮಾಡುತ್ತಿದ್ದಾರೆ. ಡಿಕೆಶಿ ಮಹಾ ಪಾಪದ ಕೆಲಸ ಮಾಡಿದ್ದಾರೆ. ನೀವು ಮಾಡಿದ ಪಾಪ ನಿಮ್ಮನ್ನ ಬಿಡಲ್ಲ. ನಿಮಗೂ ಹೆಂಡತಿ, ಮಕ್ಕಳು ಇದ್ದಾರೆ ನಿಮ್ಮ ನಿಮ್ಮ ಕುಟುಂಬ ಬೆಳೆಯಬೇಕು, ನೀವು ಇನ್ನೂ ಮುಂದೆ ಇಂತಹ ನೀಚ ಕೆಲಸ ಮಾಡಬಾರದು. ನಾನು ರೇಪ್ ಮಾಡಿದ್ದರೆ ಸರ್ವನಾಶ ಆಗಲಿ ಎಂದರು. ನನ್ನ ಸ್ಥಿತಿ ಹೇಗಾಗಿದೆ ಎಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲ ನನ್ನ ಕೊಲೆ ಮಾಡುತ್ತಾರೆ. ಡಿಕೆಶಿ ನಿಮ್ಮ ಬಳಿ ೨೦ರೂ. ಇಲ್ಲದಾಗಲೂ ನಿಮ್ಮನ್ನು ನೋಡಿದವರು ರಾಜಣ್ಣ. ದೇವರು ನಿಮ್ಮನ್ನ ಈ ಮಟ್ಟಕ್ಕೆ ತಂದಿದ್ದಾನೆ. ಆದರೆ ನೀವು ಇಂತಹ ಕೀಳು ಮಟ್ಟಕ್ಕೆ ಹೋಗಬಾರದು.