ಚಿರತೆ ಹಿಡಿದು ಅರಣ್ಯ ಇಲಾಖೆಗೆ ನೀಡಿದ ಗ್ರಾಮಸ್ಥರು

ಚಿಕ್ಕಬಳ್ಳಾಪುರ: ರೈತನೊಬ್ಬನ ಮೇಲೆ ದಾಳಿ ನಡೆಸಿದ ಚಿರತೆಯನ್ನು ಗ್ರಾಮಸ್ಥರೇ ಸೆರೆ ಹಿಡಿದು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಿರುವ ಘಟನೆ ನಡೆದಿದ್ದು, ಇದರಿಂದ ವರ್ಲಕೊಂಡ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ.
ಕಳೆದ ಒಂದು ವಾರದಿಂದ ವರ್ಲಕೊಂಡ ಗ್ರಾಮದಲ್ಲಿನ ಬೆಟ್ಟದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಸೃಷ್ಟಿಸಿದ್ದ ಚಿರತೆಯು ಗ್ರಾಮದ ಸಮೀಪದಲ್ಲಿಯೇ ಇರುವ ಚೆರ್ಲೋಪಲ್ಲಿ ಗ್ರಾಮದ ರಾಮಕೃಷ್ಣಪ್ಪ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದೆ. ದನ ಮೇಯಿಸಲು ಅವರು ಹೋಗಿದ್ದ ವೇಳೆ ಚಿರತೆಯು ಏಕಾಏಕಿ ದಾಳಿ ನಡೆಸಿದೆ.
ದಾಳಿಗೆ ತುತ್ತಾಗುತ್ತಿದ್ದಂತೆ ರಾಮಕೃಷ್ಣಪ್ಪ ಚಿರತೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸುತ್ತಮುತ್ತಲ ಜನರ ಕೂಗಾಟ ಕೇಳಿ ಚಿರತೆ ಮತ್ತೆ ಪೊದೆಗಳಲ್ಲಿ ಅಡಗಿ ಕುಳಿತಿದೆ. ಅದೃಷ್ಟವಶಾತ್ ರಾಮಕೃಷ್ಣಪ್ಪ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದರಿಂದ ವರ್ಲಕೊಂಡ ಸೇರಿ ಸುತ್ತಮುತ್ತಲ ಸುಮಾರು ನಾಲ್ಕೆöÊದು ಗ್ರಾಮಗಳ ಜನರು ದೊಣ್ಣೆ, ಕೊಡಲಿ, ಮಚ್ಚು ಹಿಡಿದು ಚಿರತೆ ರೈತನ ಮೇಲೆ ದಾಳಿ ನಡೆಸಿದ ಸ್ಥಳಕ್ಕೆ ಆಗಮಿಸಿ, ಪೊದೆಯಲ್ಲಿ ಅಡಗಿದ್ದ ಚಿರತೆಯನ್ನು ಬಲೆ ಬೀಸಿ ಜೀವಸಹಿತ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.