ಕಾಲೇಜಿನಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಸಾವು

ಹುಬ್ಬಳ್ಳಿ: ಇಲ್ಲಿನ ಜಗದ್ಗುರು ಗಂಗಾಧರ ಮಹಾವಿದ್ಯಾಲಯದಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ರಾಹುಲ್ ಕುರುಬಗೌಡ (೧೭) ತರಗತಿಯಲ್ಲಿ ಕುಸಿದು ಬಿದ್ದು ಮೃತ ಪಟ್ಟ ಪ್ರಕರಣ ಬುಧವಾರ ನಡೆದಿದೆ.
ರಾಹುಲ್ ಗದಗ ಜಿಲ್ಲೆ ರೋಣ ಮೂಲದವನಾಗಿದ್ದು, ವ್ಯಾಸಂಗಕ್ಕಾಗಿ ಹುಬ್ಬಳ್ಳಿಗೆ ಬಂದು ವಾಸವಾಗಿದ್ದನು. ಎಂದಿನಂತೆ ಬುಧವಾರ ಕಾಲೇಜಿಗೆ ತೆರಳಿ ತರಗತಿಗೆ ಹಾಜರಾಗಿದ್ದ ರಾಹುಲ್ ಶಿಕ್ಷಕರು ಕೇಳಿದ ಪ್ರಶ್ನೆಗೆ ಎದ್ದು ನಿಂತು ಉತ್ತರಿಸುತ್ತಿದ್ದಾಗ ತಡವರಿಸಿ ಕುಸಿದು ಕೆಳಗೆ ಬಿದ್ದಿದ್ದಾನೆ. ಇದರಿಂದ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಕೆಲ ಕಾಲ ಆತಂಕಕ್ಕೆ ಒಳಗಾದರು.
ನಂತರ ಚಿಕಿತ್ಸೆಗಾಗಿ ರಾಹುಲ್‌ನನ್ನು ಕೆಎಂಸಿಆರ್‌ಗೆ ಕರೆದೊಯ್ಯತ್ತಿದ್ದ ಮಾರ್ಗ ಮಧ್ಯದಲ್ಲಿ ಕೊನೆಯುಸಿರು ಎಳೆದಿದ್ದಾನೆ. ರಾಹುಲ್ ಕಳೆದ ಆರು ವರ್ಷಗಳಿಂದ ಪಿಡ್ಸ್ ರೋಗದಿಂದ ಬಳಲುತ್ತಿದ್ದ ಎಂದು ಅವನ ಪಾಲಕರ ಹೇಳಿಕೆಯಿಂದ ತಿಳಿದು ಬಂದಿದೆ.