ಅರ್ಜಂಟ್ ಬೇಕಾಗಿದ್ದಾರೆ…

Advertisement

ಈ ಚುನಾವಣೆಯಲ್ಲಿ ಬೈಯುವವರು… ಬೈಯ್ದು ಬರೆಯುವವರು ಅರ್ಜೆಂಟಾಗಿ ಬೇಕಾಗಿದ್ದಾರೆ ಎಂದು ಕೈ-ಕಮಲದವರು ಜಂಟಿಯಾಗಿ ಅರ್ಜಿ ಆಹ್ವಾನಿಸಿದ್ದಾರೆ. ಎರಡೂ ಪಕ್ಷಗಳ ಉದ್ದೇಶ ಒಂದೇ ಆಗಿರುವುದರಿಂದ ಮತ್ಯಾಕೆ ಪ್ರತ್ಯೇಕವಾಗಿ ಆಹ್ವಾನ ಮಾಡಬೇಕು? ಎಂದು ಹಗಲೂ ರಾತ್ರಿ ಯೋಚಿಸಿದ ನಂತರ ಉಭಯ ನಾಯಕರು ಜಂಟಿ ನಿರ್ಧಾರಕ್ಕೆ ಬಂದಿದ್ದಾರೆ. ಈಗ ಬಾಯಲಿ ಬೈಯ್ದದ್ದು ಸಾಕು. ಏನಿದ್ದರೂ ಅಲ್ಲಿಂದಲೇ ಬಯ್ದಾಡೋಣ. ನಮ್ಮದೇ ಆದರೆ ಅವೇ ಬೈಯ್ಗಳ. ಅದಕ್ಕೆ ಬೈಯ್ಗಳದಲ್ಲಿ ಕ್ರಿಯಾಶೀಲತೆ ಇದ್ದವರನ್ನ ನೇಮಿಸಿಕೊಳ್ಳಲು ಈ ಎರಡೂ ಪಕ್ಷಗಳು ಮುಂದಾಗಿವೆ.
ಅರ್ಜಿಗೆ ಮಾನದಂಡಗಳು..
@ ಬೈಯ್ದರೂ ಬಯ್ಯದ ಹಾಗೆ ಇರಬೇಕು…
@ ಪತ್ರಿಕೆಯ ಮುಖಪುಟದಲ್ಲಿ ಜಾಹಿರಾತಿನ ಸೆಂಟೆನ್ಸ್‌ಗಳು ಎದುರಾಳಿಗಳನ್ನು ಥಂಡಾ ಹೊಡೆಸುವಂತಿರಬೇಕು
@ ಟವಲ್‌ನಲ್ಲಿ ಕಲ್ಲು ಕಟ್ಟಿ ಹೊಡೆದಂತೆ ಇರಬೇಕು ಬೈಯ್ಗುಳ.
@ ಅರ್ಜಿದಾರ ಇದರಲ್ಲಿ ಒಳ್ಳೆ ಕೆಲಸ ಮಾಡಿದರೆ ಅವರನ್ನು ಕಾಯಂ ಆಗಿ ನೇಮಿಸಿಕೊಳ್ಳಲಾಗುವುದು.
@ ಬೈಯ್ದು ಬರೆಯುವಲ್ಲಿ ಪಿಎಚ್‌ಡಿ ಮಾಡಿದವರಿಗೆ ಆದ್ಯತೆ ನೀಡಲಾಗುವುದು.
@ ಎದುರಾಳಿಗಳು ನಾಳೆ ಪತ್ರಿಕೆ ಫ್ರಂಟ್ ಪೇಜ್‌ನಲ್ಲಿ ಏನಂತ ಕೊಡಬಹುದು ಎಂದು ಮೊದಲೇ ಊಹಿಸುವ ಶಕ್ತಿ ಹೊಂದಿರಬೇಕು.
@ ಅರ್ಜಿಸಲ್ಲಿಸಲು ಕೊನೆ ದಿನಾಂಕ ಇಂದೇ.
ಸಮೀಪದ ಕೈ ಕಮಲದ ಕಚೇರಿಗಳಲ್ಲಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಂಜೆಯೊಳಗೆ ಕಳಿಸಬೇಕು. ತಡವಾದರೆ ನಿಮಗೇ ಲುಕ್ಸಾನು. ಜೋಕೆ