ರೈತ ನಾಯಕ ಜೆ. ಕಾರ್ತಿಕ್‌ ರಸ್ತೆ ಅಪಘಾತದಲ್ಲಿ ಸಾವು

Advertisement

ವಿಜಯನಗರ:‌ ರಸ್ತೆ ಅಪಘಾತದಲ್ಲಿ ರೈತ ನಾಯಕ ಜೆ. ಕಾರ್ತಿಕ್(40) ಮೃತಪಟ್ಟಿದ್ದಾರೆ.
ಬೂದಗುಂಪಾ ಕ್ರಾಸ್ ಬಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕಾರ್ತಿಕ್‌ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ 4.30ರ ವೇಳೆ ಅವರು ಕೊನೆಯುಸಿರು ಎಳೆದಿದ್ದಾರೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತವಾಗಿತ್ತು, ಅಪಘಾತದ ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲವಾದುದರಿಂದ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೋ, ಹಿಟ್ ಆ್ಯಂಡ್ ರನ್ ಆಗಿದೆಯೋ ತಿಳಿದುಬಂದಿಲ್ಲ. ಕಾರ್ತಿಕ್ ಈ ಹಿಂದೆ ಕೋಡಿಹಳ್ಳಿ ಚಂದ್ರಶೇಖರ ಬಣದ ರೈತ ಸಂಘದಲ್ಲಿದ್ದರು. ನಂತರ ಕೋಡಿಹಳ್ಳಿ ಚಂದ್ರಶೇಖರ್ ಬಣದಿಂದ ಹೊರಬಂದು ಸ್ವತಃ ಸಂಘವೊಂದನ್ನು ಕಟ್ಟಿದ್ದರು. ಕರ್ನಾಟಕ ರಾಜ್ಯ ರೈತರ ಸಂಘ ಹಸಿರು ಸೇನೆ ಅನ್ನುವ ಸಂಘದಲ್ಲಿ ಸಕ್ರಿಯರಾಗಿದ್ದರು. ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದ ಕಾರ್ತಿಕ್ ಸಾವಿನ ಹಿಂದೆ ಹಲವು ಅನುಮಾನ ಎದ್ದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.