ಮೌಲ್ಯಮಾಪನಕ್ಕೆ ಬಂದಿದ್ದ ಉಪನ್ಯಾಸಕ ಹೃದಯಾಘಾತದಿಂದ ಸಾವು

Advertisement

ಬಳ್ಳಾರಿ: ದ್ವಿತೀಯ ಪಿಯು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಬಂದಿದ್ದ ಉಪನ್ಯಾಸಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ಸಂಭವಿಸಿದೆ.
ಉಪನ್ಯಾಸಕ ಶಂಕರಗೌಡ(೪೨) ಮೃತರು. ನೆರೆಯ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲುಕು ಕರಡಕಲ್ ಗ್ರಾಮದ ನಿವಾಸಿಯಾಗಿದ್ದ ಶಂಕರಗೌಡ ಅವರು, ಮಸ್ಕಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಗರದ ಸಂತಜಾನ್ ಪಿಯು ಕಾಲೇಜಿನಲ್ಲಿ ಇಂದಿನಿಂದ ಆರಂಭವಾಗಿದ್ದ ದ್ವಿತೀಯ ಪಿಯು ಸಮಾಜಶಾಸ್ತ್ರ ಉತ್ತರ ಪತ್ರಿಕೆಯ ಮೌಲ್ಯಮಾಪನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಬಳ್ಳಾರಿಗೆ ಬಂದಿದ್ದರು. ಸಂತಜಾನ್ ಕಾಲೇಜಿನಲ್ಲಿ ಬೆಳಗ್ಗೆ ರಿಪೋರ್ಟ್ ಮಾಡಿಕೊಂಡಿದ್ದ ಉಪನ್ಯಾಸಕ ಶಂಕರಗೌಡ, ೧೨ ಗಂಟೆ ಸುಮಾರಿಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ವಲ್ಪ ಹೊತ್ತಿಗೆ ಕೇಂದ್ರದಲ್ಲೇ ಹೃದಯಾಘಾತವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಸಿರುಗುಪ್ಪ ರಸ್ತೆಯಲ್ಲಿನ ಬಳ್ಳಾರಿ ಹೆಲ್ತ್ ಸೆಂಟರ್ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರೊಳಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ ಎಂದು ಡಿಡಿಪಿಯು ಪಾಲಾಕ್ಷ ತಿಳಿಸಿದ್ದಾರೆ.