ಮೋದಿ ಪರ ಸುನಾಮಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ

Advertisement

ಗದಗ(ರೋಣ): ದೇಶದಲ್ಲಿ ಪ್ರಧಾನಿ ಮೋದಿ ಪರ ಸುನಾಮಿ ಇದ್ದು ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ರೋಣ ಪಟ್ಟಣದಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಬಸವರಾಜ ಬೊಮ್ಮಾಯಿ ಸಮರ್ಥ ಮುಖ್ಯಮಂತ್ರಿ ಅಲ್ಲ ಅಂತ ಆರೋಪ ಮಾಡಿದ್ದಾರೆ. ನಾನು ರಾಜ್ಯಕ್ಕೆ ಏನು ಮಾಡಿದ್ದೇನೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ರೋಣ ಕ್ಷೇತ್ರಕ್ಕೆ ಏನು ಮಾಡಿದ್ದೇನೆ ಎಂದು ತಾವು ಮಾಡಿದ ಅಭಿವೃದ್ಧಿ ಕೆಲಸದ ವಿವರವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ರೋಣ ನರೇಗಲ್ ಕುಡಿಯುವ ನೀರಿನ ಯೋಜನೆಯನ್ನು ಕಳಕಪ್ಪ ಬಂಡಿಯವರು ಶಾಸಕರಾದಾಗ ಆರಂಭ ಮಾಡಿದ್ದೇವು. 2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಯೋಜನೆ ಸಂಪೂರ್ಣ ಸ್ಥಗಿತಗೊಳಿಸಿದರು. ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯವೂ ಹೌದು, ಪುಣ್ಯದ ಕೆಲಸವೂ ಹೌದು. ನಾನು ಸಿಎಂ ಆದ ಮೇಲೆ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದೆ ಎಂದು ಹೇಳಿದರು.
ನಾನು ಸಿಎಂ ಆಗಿದ್ದಾಗ ರಾಜ್ಯದ 30 ಲಕ್ಷ ಮನೆಗಳಿಗೆ ಕುಡಿಯುವ ನೀರು ಕೊಡುವ ಕೆಲಸ ಮಾಡಿದ್ದೇನೆ. ಈ ಭಾಗದ 21 ಕೆರೆ ತುಂಬಿಸಲು ಆಲ್ ಮಟ್ಟಿ ಆಣೆಕಟ್ಟೆಯಿಂದ ನೀರು ತಂದವರು ಬಸವರಾಜ ಬೊಮ್ಮಾಯಿ. ಇವತ್ತಿನ ಕಾಂಗ್ರೆಸ್ ಸರ್ಕಾರ ನೀರು ಕೊಡುವುದರಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರ ಶಾಸ್ವತ ಅಲ್ಲ. ಕಳಕಪ್ಪ ಬಂಡಿ ಚುನಾವಣೆಯಲ್ಲಿ ಸೋತಿರಬಹುದು.ಆದರೆ, ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.
ಶಾಸಕರು, ಮಂತ್ರಿಗಳು ಬಹಳ ಜನ ಆಗಬಹುದು. ಆದರೆ ಜನನಾಯಕ ಆಗುವುದು ಕಷ್ಟ. ರಾಜ್ಯದಲ್ಲಿ ಐದಾರು ನೂರು ಜನ ಸಚಿವರಾಗಿದ್ದಾರೆ. ಆದರೆ, ಜನನಾಯಕರು ಎಷ್ಟು ಜನ ಆಗಿದ್ದಾರೆ. ನಮಗೆ ಜನಪ್ರೀಯ ಶಾಸಕರು ಬೇಡ, ಜನಪರ ಶಾಸಕರು ಬೇಕು ಎಂದರು.

ಕಾಂಗ್ರೆಸ್‌ಗೆ ಚೊಂಬು
ಲೋಕಸಭೆ ಚುನಾವಣೆಯಲ್ಲಿ ಈಗ ನಡೆದಿರುವ 14 ಕ್ಷೇತ್ರಗಳ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಉತ್ತರ ಕರ್ನಾಟಕದಲ್ಲಿಯೂ ಅಷ್ಟೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಬಿಜೆಪಿಗೆ ಮತ ಹಾಕಿ ಮೇ 7ರ ನಂತರ ಕಾಂಗ್ರೆಸ್‌ಗೆ ಚೊಂಬು ಕೊಡಬೇಕು. ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.