ಪ್ರಧಾನಿ ಬಂದರೂ ಬಾರದ ಸಂಸದ

Advertisement

ಶಿರಸಿ: ಬಿಜೆಪಿ ಟಿಕೆಟ್ ಕೈತಪ್ಪುತ್ತಿದ್ದಂತೆ ಮುನಿಸಿಕೊಂಡು ನಾಪತ್ತೆಯಾಗಿರುವ ಸಂಸದ ಅನಂತಕುಮಾರ್ ಹೆಗಡೆ ಇದೀಗ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ತಮ್ಮ ಹುಟ್ಟೂರಿಗೆ ಆಗಮಿಸಿದರೂ ಕೂಡ ಮತ್ತೊಮ್ಮೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಈ ವೇಳೆ ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ತಮ್ಮ ಹುಟ್ಟೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೂ ಗೈರಾಗಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಟಿಕೆಟ್ ಕೈತಪ್ಪಿದ ದಿನದಿಂದಲೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದಿರುವ ಅನಂತಕುಮಾರ್ ಹೆಗಡೆ ಮೋದಿ ಕಾರ್ಯಕ್ರಮಕ್ಕಾದರೂ ಆಗಮಿಸುವ ನಿರೀಕ್ಷೆ ಕೆಲ ಕಾರ್ಯಕರ್ತರಿಗೆ ಮೂಡಿತ್ತು. ಆದರೆ ಇದೀಗ ಸಮಾವೇಶಕ್ಕೂ ಬಾರದೆ ತಾವು ಅಸಮಾಧಾನಗೊಂಡಿರುವುದು ನಿಜ ಎನ್ನುವುದನ್ನು ಸಾಭೀತುಪಡಿಸಿದ್ದಾರೆ.
ಇನ್ನು ಬಿಜೆಪಿ ಕೂಡ ಪ್ರಧಾನಿ ಮೋದಿ ಪ್ರಚಾರ ಕಾರ್ಯಕ್ರಮದ ಬ್ಯಾನರ್‌ಗಳಲ್ಲಿ ಸಂಸದ ಅನಂತಕುಮಾರ್ ಹೆಗಡೆ ಅವರ ಪೋಟೋ ಹಾಗೂ ಹೆಸರನ್ನು ಕೈಬಿಟ್ಟಿದೆ. ಇನ್ನು ಕಳೆದ ವಿಧಾನಸಭಾ ಚುನಾವಣೆ ವೇಳೆ ಅಂಕೋಲಾಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ವೇಳೆಗೂ ಸಂಸದ ಅನಂತಕುಮಾರ್ ಹೆಗಡೆ ಗೈರಾಗಿದ್ದರು.