ಜ್ಯುವೆಲ್ಲರ್ಸ್‌ ಮಳಿಗೆಯಲ್ಲಿ ಗ್ಯಾಸ್ ಸ್ಫೋಟ: ಐವರಿಗೆ ಗಾಯ, ಒಬ್ಬನ ಸ್ಥಿತಿ ಗಂಭೀರ

Advertisement

ಬಳ್ಳಾರಿ: ನಗರದ ತೇರು ಬೀದಿಯ ಮಾರ್ಟಿನ್ ರಸ್ತೆಯಲ್ಲಿರುವ ಚಿನ್ನಾಭರಣಗಳ ಮಾರಾಟ ಮಳಿಗೆ ಕಲ್ಯಾಣ್ ಜ್ಯುವೆಲರ್ಸ್‌ನಲ್ಲಿ ಎಸಿಗೆ ತುಂಬಿಸುವ ಗ್ಯಾಸ್ ಸ್ಫೋಟಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಮಳಿಗೆ ಸಂಪೂರ್ಣ ಸೆಂಟ್ರಲೈಜಡ್ ಎಸಿ ಸೌಲಭ್ಯ ಹೊಂದಿದೆ. ಎಸಿಯಲ್ಲಿನ ಗ್ಯಾಸ್ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಮಿಕರು ಗ್ಯಾಸ್ ತುಂಬಿಸಲು ಗುರುವಾರ ಮಳಿಗೆಗೆ ಬಂದಿದ್ದಾರೆ. ಎಸಿಗೆ ತುಂಬಿಸುವಾಗ ಗ್ಯಾಸ್ ಸ್ಫೋಟಗೊಂಡಿದ್ದು, ಗ್ಯಾಸ್ ತುಂಬಿಸುವ ಕಾರ್ಮಿಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಟ್ಟಗಾಯಗಳಿಂದ ಗಂಭೀರಗೊಂಡ ಕಾರ್ಮಿಕನನ್ನು ಮಳಿಗೆಯ ಸಿಬ್ಬಂದಿಗಳೇ ಹೊರತಂದು ವಿಮ್ಸ್‌ಗೆ ದಾಖಲಿಸಿದರು. ಇನ್ನುಳಿದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಮಳಿಗೆಯ ಕಿಟಕಿ, ಮುಖ್ಯದ್ವಾರದ ಗಾಜುಗಳು ಪುಡಿಪುಡಿಯಾಗಿ ಚೆಲ್ಲಾಪಿಲ್ಲಾಗಿಯಾಗಿವೆ ಎಂದು ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಸಿಪಿಐ ಎಂ.ಎನ್. ಸಿಂಧೂರ ತಿಳಿಸಿದ್ದಾರೆ.