ಗಂಡ-ಹೆಂಡತಿ ಜಗಳ: ಮೊಸಳೆ ಬಾಯಿಗೆ ಆರು ವರ್ಷದ ಮಗು

Advertisement

ಕಾರವಾರ : ಗಂಡನೊಂದಿಗೆ ಜಗಳವಾಡಿದ ತಾಯಿಯೊಬ್ಬಳು ತನ್ನ ಆರು ವರ್ಷದ ಗಂಡು ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಾಲಮಡ್ಡಿಯಲ್ಲಿ ಈ ಘಟನೆ ನಡೆದಿದೆ. ಸಾವಿತ್ರಿ ಎಂಬಾಕೆ ತನ್ನ ಆರು ವರ್ಷದ ಮಗನನ್ನು ನಾಲೆಗೆ ಎಸೆದಿದ್ದಾಳೆ. ವಿನೋದ್ (6) ಮೃತ ದುರ್ದೈವಿ.
ರವಿಕುಮಾರ್ ಶೆಳ್ಳೆ ಮತ್ತು ಸಾವಿತ್ರಿ ದಂಪತಿಗಳು ನಿನ್ನೆ ಶನಿವಾರ ಪರಸ್ಪರ ಜಗಳ‌ ಮಾಡಿಕೊಂಡಿದ್ದಾರೆ. ಮಗುವು ಮೂಕನಾಗಿದ್ದರಿಂದ ಸಾವಿತ್ರಿ ಹಾಗೂ ರವಿಕುಮಾರ್ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಜಗಳದಿಂದ ಮಾನಸಿಕವಾಗಿ‌ ನೊಂದ ಸಾವಿತ್ರಿ ಕೋಪದಿಂದ 6 ವರ್ಷದ ಗಂಡು ಮಗು ವಿನೋದ್​​ನನ್ನು ಅಲ್ಲೆ ಹತ್ತಿರದಲ್ಲಿರುವ ದೊಡ್ಡ ನಾಲೆಗೆ ಎಸೆದು ಬಂದಿದ್ದಾಳೆ. ಘಟನೆ ನಡೆದು ಸ್ವಲ್ಪ ಸಮಯದ ನಂತರ ಸಾವಿತ್ರಿ ಮಗುವನ್ನು ನಾಲೆಗೆ ಎಸೆದು ಬಂದಿರುವುದನ್ನು ಸ್ಥಳೀಯರಿಗೆ ತಿಳಿಸಿದ್ದಾಳೆ. ಸ್ಥಳೀಯರು ತಕ್ಷಣವೇ ನಾಲೆಯ ಹತ್ತಿರ ಬಂದು ಮಗುವಿನ ಹುಡುಕಾಟವನ್ನು ನಡೆಸಿದ್ದಾರೆ. ಕೂಡಲೇ ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣೆಗೆ ಕೂಡ ಮಾಹಿತಿಯನ್ನು ನೀಡಿದ್ದಾರೆ. ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಸಹಕಾರದಲ್ಲಿ ಹಾಗೂ ಸ್ಥಳೀಯ ಮುಳುಗು ತಜ್ಞರ ಮತ್ತು ಸ್ಥಳೀಯರ ನೆರವಿನೊಂದಿಗೆ ಮಗುವಿನ ಶೋಧ ಕಾರ್ಯ ನಡೆಸಿದ್ದಾರೆ. ನಿನ್ನೆ ರಾತ್ರಿ ಈ ದುರ್ಘಟನೆ ನಡೆದಿದ್ದು, ಮಗುವಿನ ಶೋಧ ಕಾರ್ಯ ರಾತ್ರಿಯಿಂದ ಮುಂದುವರೆದಿತ್ತು. ಅದರೆ ಎಲ್ಲೂ ಮಗು ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಮಗುವಿನ ಮೃತದೇಹ ಪತ್ತೆಯಾಗಿದೆ. ಮೊಸಳೆಯ ಬಾಯಿಯಲ್ಲಿ ಕಾಣಿಸಿಕೊಂಡ ಮಗುವಿನ ಮೃತದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರ ತೆಗೆದಿದ್ದಾರೆ. ಇನ್ನೂ ಆರೋಪಿಗಳಾದ ರವಿ ಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.