ಕಾಸರಗೋಡು ಕನ್ನಡತನವೇ ಮೇಳೈಸಿರುವ ಸಪ್ತ ಭಾಷಾ ಸಂಗಮದ ಕನ್ನಡದ ಬೀಡು

Advertisement

ಕಾಸರಗೋಡು: ಕಾಸರಗೋಡು ಸಪ್ತಭಾಷಾ ಸಂಗಮದ ಕನ್ನಡದ ಬೀಡಾಗಿದೆ. ನಿತ್ಯ ಕನ್ನಡತನವೇ ಮೇಳೈಸಿರುವ, ಕನ್ನಡತನವನ್ನೇ ಆಚರಿಸುತ್ತಿರುವ ಕನ್ನಡದ ಬೀಡು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅಭಿಪ್ರಾಯಪಟ್ಟರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಹಮ್ಮಿಕೊಂಡಿದ್ದ ಗಡಿನಾಡ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿದ ಬಳಿಕ ನಾನಾ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು. ಕಾಸರಗೋಡು ಗಡಿ ನಾಡು ಆಗಿದ್ದರೂ ಇಲ್ಲಿ ಕನ್ನಡದ ಮನಸ್ಸುಗಳು ಕನ್ನಡತನದ ವಾತಾವರಣವನ್ನು ನಿತ್ಯ ಆಚರಣೆಯಲ್ಲಿ ಇಟ್ಟಿವೆ. ಇವರೆಲ್ಲರೂ ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಂಕಣಿ ಮನೆಮಾತಾಗಿದ್ದ ಮಂಜೇಶ್ವರದ ಗೋವಿಂದ ಪೈಗಳು ಕನ್ನಡದ ಮೊದಲ ರಾಷ್ಟ್ರಕವಿಗಳು. ʻಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂದು ತಮ್ಮ ಕವನದ ಮೂಲಕ ಇಲ್ಲಿನ ಕನ್ನಡ ಸಮುದಾಯವನ್ನು ಎಚ್ಚರಿಸಿದ ಶತಾಯುಷಿ ಕಯ್ಯಾರ ಕಿಞ್ಣಣ್ಣ ರೈ ಅವರ ಮನೆ ಮಾತು ತುಳು. ಇವರು ಕೊನೆಯ ಉಸಿರಿನವರೆಗೂ ನಾನು ಸಾಯುವುದು “ಕರ್ನಾಟಕದಲ್ಲಿ ಕಾಸರಗೋಡು ವಿಲೀನವಾದ ನಂತರ” ಎನ್ನುತ್ತಲೇ ಇದ್ದರು.
ಕಾಸರಗೋಡಿನ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿರುವ ರತ್ನಾಕರ ಬಳ್ಳಮೂಲೆ ಅವರ ಮನೆ ಮಾತು ಮಲಯಾಳ. ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಕೂಡ ಇಲ್ಲಿಯವರು. ಹೀಗೆ ಬೇರೆ ಬೇರೆ ಭಾಷೆಗಳ ಮನೆಮಾತಾದವರೆಲ್ಲ ಇಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಬದುಕನ್ನು ರೂಪಿಸಿದ್ದಾರೆ ಎಂದು ಕಾಸರಗೋಡಿನ ಕನ್ನಡ ಸಾಂಸ್ಕೃತಿಕ ಚರಿತ್ರೆಯನ್ನು ಸ್ಮರಿಸಿಕೊಂಡರು.
ಕಾಸರಗೋಡು ಕನ್ನಡದ ಬೀಡು, ಇಲ್ಲಿರುವುದು ಕನ್ನಡದ ನೆಲೆ’ ಎನ್ನುವುದು ಇಲ್ಲಿನ ಕನ್ನಡದ ವಾತಾವರಣ ನೋಡಿ ಮನದಟ್ಟಾಗಿದೆ. ಬೆಂಗಳೂರು ಕೇಂದ್ರಿತ ಕನ್ನಡ ಹೋರಾಟಗಾರರ ಅಭಿಪ್ರಾಯ ಭಿನ್ನವಾಗಿರಬಹುದು. ಆದರೆ ನಾನು ಇಲ್ಲಿಗೆ ಬರುವಾಗ ದಾರಿಯುದ್ದಕ್ಕೂ ಕನ್ನಡದ ಫಲಕ ಮತ್ತು ಬ್ಯಾನರ್ ಗಳನ್ನು ನೋಡಿಕೊಂಡೇ ಬಂದೆ. ಇಲ್ಲಿನ ಕನ್ನಡದ ವಾತಾವರಣ ಗಟ್ಟಿಯಾಗಿದೆ ಎಂದರು.