ಕಾಂಗ್ರೆಸ್ ದೇಶಕ್ಕೆ ಮಾರಕ: ಅಣ್ಣಾಮಲೈ

Advertisement

ಬಾಗಲಕೋಟೆ: ಪ್ರಧಾನಿ ಸ್ಥಾನಕ್ಕೆ ವ್ಯಕ್ತಿಯನ್ನೇ ಆಯ್ಕೆ ಮಾಡದ ಇಂಡಿಯಾ ಒಕ್ಕೂಟದಲ್ಲಿ ಇಂದಿಗೂ ಹಗ್ಗಜಗ್ಗಾಟ ಮುಂದುವರೆದಿದೆ. ಕಾಂಗ್ರೆಸ್‌ನ ಇಂಡಿಯಾ ಒಕ್ಕೂಟ ದೇಶಕ್ಕೆ ಮಾರಕವಾಗಿದ್ದು, ಎಂದಿಗೂ ಗೆಲ್ಲಿಸಬೇಡಿಯೆಂದು ತಮಿಳನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ರಬಕವಿ-ಬನಹಟ್ಟಿ ನಗರದ ದಾನೇಶ್ವರಿ ಸಮುದಾಯ ಭವನದಲ್ಲಿ ಸಾವಿರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಕೇವಲ ಗಾಂಧಿ, ಖರ್ಗೆ ಸೇರಿದಂತೆ ಪರಿವಾರದೊಂದಿಗೆ ವಯಕ್ತಿಕ ರಾಜಕೀಯವಾಗಿದೆ.
ಜನಸಾಮಾನ್ಯರ ಮಧ್ಯೆ ರಾಜಕೀಯ ಎಳೆದು ತರುವಲ್ಲಿ ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಅಪಾರವಾಗಿದ್ದು, ಇದೀಗ ಎಂದೂ ಎಲ್ಲೂ ಗುರ್ತಿಸದ ವ್ಯಕ್ತಿಗಳನ್ನು ಅಚ್ಚರಿಯೊಂದಿಗೆ ರಾಜಕೀಯಕ್ಕೆ ಎಳೆದು ತಂದು ದೇಶವನ್ನಾಳಲು ಸಾಮಾನ್ಯ ಪ್ರಜೆಯಿಂದಲೂ ಸಾಧ್ಯವೆಂದು ತೋರಿಸುವಲ್ಲಿ ಮೋದಿ ಮೋಡಿ ಮಾಡಿದ್ದಾರೆಂದು ಅಣ್ಣಾಮಲೈ ತಿಳಿಸಿದರು.
ಕೇಂದ್ರ ಸರ್ಕಾರ ನಮ್ಮದಾದರೆ 20 ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್ ನೇತೃತ್ವದ ರಾಹುಲ್ ಗಾಂಧಿ, ಮೊದಲು ಎಷ್ಟು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದಾರೆಂಬುದನ್ನು ನೋಡಬೇಕಿದೆ.
ಕೇವಲ ೨೧೭ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಸರ್ಕಾರ ರಚನೆಗೆ ಕನಿಷ್ಠ ೨೭೬ ಬೇಕು. ಹೀಗಿರುವಾಗ ಶೇ.೪೦ ರಷ್ಟು ಮಾತ್ರ ಕಣದಲ್ಲಿದ್ದು, ಗ್ಯಾರಂಟಿಗಳನ್ನು ಹೊಳೆ ಹರಿಸುತ್ತಿರುವದನ್ನು ಜನ ನಂಬುತ್ತಾರೆಯೇ? ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.
ಸತತ ೨೫ ವರ್ಷಗಳ ನಿರಂತರ ಮುಖ್ಯಮಂತ್ರಿಯೊಂದಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದೆ ದೇಶದ ಮೊದಲ ವ್ಯಕ್ತಿಯಾಗಿ ದಾಖಲೆ ಮಾಡಿದ್ದಾರೆ. ಇದೀಗ ಮೂರನೇಯ ಬಾರಿ ಪ್ರಧಾನಿಗೆ ಅವಕಾಶ ಕಲ್ಪಿಸಬೇಕೆಂದರು.
ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಸೌಮ್ಯ ಹಾಗೂ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ೫ನೇ ಬಾರಿ ಗೆಲ್ಲಿಸುವ ಮೂಲಕ ಜಿಲ್ಲೆಯ ಹೊಸ ದಾಖಲೆ ತರುವಂತೆ ಅಣ್ಣಾಮಲೈ ಮನವಿ ಮಾಡಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಗದ್ದಿಗೌಡರಿಗೆ ತೇರದಾಳ ಕ್ಷೇತ್ರದಿಂದ ಸತತ ಹೆಚ್ಚಿನ ಮತಗಳ ಅಂತರದ ಗೆಲುವಿಗೆ ಮೊದಲ ಪ್ರಾಶಸ್ತö್ಯ ಪಡೆದಿದೆ. ಈ ಬಾರಿಯೂ ಸುಮಾರು 40 ಸಾವಿರ ಮತಗಳ ಅಂತರದ ಗೆಲುವು ಕ್ಷೇತ್ರವೊಂದರಿಂದಲೇ ಆಗಲಿದೆ ಎಂದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ಕೇವಲ ಅಲ್ಪಸಂಖ್ಯಾತರ ಓಲೈಕೆಯಿಂದ ರಾಜಕಾರಣ ನಡೆಸುತ್ತಿರುವ ಕಾಂಗ್ರೆಸ್‌ಗೆ ಮತ ನೀಡುವದು ದೇಶದ ವಿರುದ್ಧ ಮತ ನೀಡಿದಂತೆಯೆಂದರು. ಸಾಮಾನ್ಯ ಕಾರ್ಯಕರ್ತರ ಹಾಗು ರಾಜಕೀಯ ಅನುಭವ ಹೊಂದಿರದ ವಿದ್ಯಾವಂತ ಯುವಕರಿಗೂ ಅವಕಾಶ ಕಲ್ಪಿಸುವಲ್ಲಿ ಬಿಜೆಪಿ ಕಾರಣವಾಗಿದೆ.
ಜನಸಾಮಾನ್ಯರ ಕನಸು ನನಸಾಗಲು ಬಿಜೆಪಿಯಿಂದ ಮಾತ್ರ ಸಾಧ್ಯವೆಂದರು.