ಇಬ್ಬರು ಮಕ್ಕಳನ್ನು ಬೆಂಕಿಗೆ ಎಸೆದು ತಾಯಿ ಆತ್ಮಹತ್ಯೆ

ಬೆಂಕಿ
Advertisement

ಚಿತ್ರದುರ್ಗ: ಬೇಲಿಗೆ ಬೆಂಕಿ ಹಚ್ಚಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಳ್ಳಕೆರೆ ತಾಲ್ಲೂಕಿನ ಮಲ್ಲಾಸಮುದ್ರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮಾರಕ್ಕ (೨೪), ನಯನ (೪) ಹರ್ಷವರ್ಧನ್ (೨) ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಗ್ಗೆ ವಿದ್ಯುತ್ ದೀಪ ಉರಿಯುತ್ತಿದ್ದು ಬಿಲ್ ಜಾಸ್ತಿ ಬರಲಿದೆ, ಸ್ವಿಚ್ ಆಫ್ ಮಾಡುವಂತೆ ಅತ್ತೆ ಮಾರಕ್ಕಗೆ ಹೇಳಿದರು. ಇದರಿಂದ ಇಬ್ಬರ ನಡುವೆ ಜಗಳವಾಯಿತು. ನಂತರ ಬಹಿರ್ದೆಸೆಗೆ ಹೋಗಿ ಬರುವುದಾಗಿ ಹೋದ ಮಾರಕ್ಕ ಬೇಲಿಗೆ ಬೆಂಕಿ ಹಚ್ಚಿ ಮಕ್ಕಳನ್ನು ಬೆಂಕಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಬಂಧಿಕರಲ್ಲಿ ಮದುವೆಯಾಗಿದ್ದ ಮಾರಕ್ಕ ಮತ್ತು ಗಂಡನ ನಡುವೆ ಯಾವುದೇ ಮನಸ್ತಾಪ ಇರಲಿಲ್ಲ. ಆದರೆ ಸಣ್ಣ ಸಣ್ಣ ವಿಚಾರಕ್ಕೂ ಕೋಪ ಮಾಡಿಕೊಳ್ಳುತ್ತಿದ್ದಳು ಎಂದು ತವರು ಮನೆಯವರಿಂದ ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಚಳ್ಳಕೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.