ಇಂದಿನಿಂದ ಹಂಪಿ ಉತ್ಸವ

Advertisement

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ ೮ಕ್ಕೆ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಗಾಯತ್ರಿ ಪೀಠದ ವೇದಿಕೆ, ಎದುರು ಬಸವಣ್ಣ ಮಂಟಪ, ವಿರೂಪಾಕ್ಷೇಶ್ವರ ಹಾಗೂ ಸಾಸವೆಕಾಳು ಗಣಪತಿ ಆವರಣ ಸೇರಿದಂತೆ ಒಟ್ಟು ನಾಲ್ಕು ವೇದಿಕೆಗಳಲ್ಲಿ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು, ಸಮಾರಂಭಗಳು ನಡೆಯಲಿವೆ.
ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವದಲ್ಲಿ ಈ ಬಾರಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಜ್ಯಮಟ್ಟದ ಕಲಾವಿದರಿಗೂ ಆದ್ಯತೆ ನೀಡಲಾಗಿದೆ. ವಿಜಯನಗರದ ನೆಲದ ಕಲೆ, ಸಾಹಿತ್ಯ, ಸಂಸ್ಕೃತಿ ಜಗತ್ತಿಗೆ ಉಣಬಡಿಸುವ ಕಾರ್ಯ ನಡೆಯಲಿದೆ.
ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿ ಪಕ್ಕದ ಮೈದಾನದಲ್ಲಿ ಹಮ್ಮಿಕೊಂಡಿರುವ ಶಿಲ್ಪಕಲಾ ಶಿಬಿರದಲ್ಲಿ ಹೊಸಪೇಟೆ ಸೇರಿದಂತೆ ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ಬರೋಡಾ, ಮಂಡ್ಯ, ಬುಕ್ಕಸಾಗರ, ಬೈಲುವದ್ದಿಗೇರಿ, ವಿಜಯಪುರ, ಬಾದಾಮಿ ಭಾಗದ ೨೦ ಕಲಾವಿದರು ಭಾಗವಹಿಸಿದ್ದಾರೆ. ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಈ ಬಾರಿ ೧೦೦ ಬಸ್‌ಗಳನ್ನು ಉಚಿತವಾಗಿ ಸಾರಿಗೆ ಸಂಸ್ಥೆಯ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿದೆ.