ಆಸ್ತಿ ಕೊಡದಿದ್ದಕ್ಕೆ ನಲವತ್ತು ಅಡಿಕೆ ಮರ ಕಡಿದ ಸೊಸೆ!

Advertisement

ದಾವಣಗೆರೆ: ಆಸ್ತಿಯಲ್ಲಿ ಪಾಲು ಕೊಡದ ಕಾರಣ 40 ಅಡಿಕೆ ಮರಗಳನ್ನು ಕಡಿದು ಸೊಸೆಯೊಬ್ಬಳು ತನ್ನ ಅತ್ತೆ ಮಾವನ ವಿರುದ್ಧ ಸೇಡು ತೀರಿಸಿಕೊಂಡ ಘಟನೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ.

ಚಿದಾನಂದ ಸ್ವಾಮಿ ಹಾಗೂ ಶಿವನಾಗಮ್ಮ ದಂಪತಿಯ ಹಿರಿಯ ಪುತ್ರ ಕುಮಾರಸ್ವಾಮಿ ಅವರ ಪತ್ನಿ ರೂಪ ಮರ ಕಡಿದು ಹಾಕಿರುವ ಆರೋಪ ಎದುರಿಸುತ್ತಿದ್ದಾರೆ.

ರೂಪ ಹಲವಾರು ವರ್ಷಗಳಿಂದ ಆಸ್ತಿಯಲ್ಲಿ ಪಾಲು ಕೊಡುವಂತೆ ಅತ್ತೆ ಮಾವನಿಗೆ ಆಗಾಗ ಕೇಳುತ್ತಿದ್ದರು. ಆದರೆ, ಇದಕ್ಕೆ ಅವರು ಒಪ್ಪಿರಲಿಲ್ಲ. ಇದೇ ಕಾರಣದಿಂದ ಕುಪಿತಕೊಂಡ ರೂಪ ತೋಟಕ್ಕೆ ನುಗ್ಗಿ ಮೂರು ವರ್ಷದ ಅಡಿಕೆ ಮರಗಳನ್ನು ಮಚ್ಚಿನಿಂದ ಕಡಿದು ಹಾಕಿದ್ದಾರೆ ಎನ್ನಲಾಗಿದೆ.

ಈಗಾಗಲೇ ಮನೆ ಕಟ್ಟಿಸಿಕೊಳ್ಳಲು ಎಂಟು ಲಕ್ಷ ರೂ., ನಮ್ಮಿಂದ ಪಡೆದುಕೊಂಡಿದ್ದಾರೆ. ನಮಗೆ ವಯಸ್ಸಾಗಿದೆ. ನಮ್ಮನ್ನ ಸರಿಯಾಗಿ ನೋಡಿಕೊಳ್ಳದೆ ಹಲ್ಲೆ ಮಾಡುತ್ತಿದ್ದಾಳೆ. ಇದು ಸಾಲದ್ದು ಎಂಬಂತೆ ಮಚ್ಚು ತಂದು ಅಡಿಕೆ ಮರ ಕಡಿದು ಹಾಕಿದ್ದಾಳೆ ಎಂದು ಸೊಸೆಯ ವಿರುದ್ಧ ಆರೋಪಿಸಿ ಮಾವ ಚಿದಾನಂದಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.