ದಾವಣಗೆರೆ: ಬಿ.ವೈ. ವಿಜಯೇಂದ್ರ ಆಗಲಿ, ಬಸವನಗೌಡ ಪಾಟೀಲ್ ಯತ್ನಾಳ್ ಆಗಿರಲಿ ಯಾರೇ ಆದರೂ ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ಚಿಂತನೆ ನಡೆಸಲಿ ಎಂದು ವಿಪ ಸದಸ್ಯ ಎನ್. ರವಿಕುಮಾರ ಕಿವಿಮಾತು ಹೇಳಿದ್ದಾರೆ.
ಜಗಳೂರು ತಾ. ಉಚ್ಚಂಗಿಪುರ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರೇ ಆಗಿದ್ದರೂ ಪಕ್ಷದ ಶಿಸ್ತನ್ನು ಯಾರೂ ಸಹ ಮರೆಯಬಾರದು ಎಂದರು.
ರಾಜ್ಯ ಬಿಜೆಪಿಯಲ್ಲಿ ತಿಕ್ಕಾಟವೂ ಹೆಚ್ಚಾಗಿದೆ. ಶ್ರೀರಾಮುಲು ಸೇರಿದಂತೆ ಬಹಳಷ್ಟು ಜನರು ರಾಜ್ಯ ಬಿಜೆಪಿ ಅಧ್ಯಕ್ಷರಾಗಲು ಮುಂದಾಗಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳರೇ ಅಧ್ಯಕ್ಷರಾದರೂ ಬಹಿರಂಗ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಅವರು ತಿಳಿಸಿದರು.
ಬಿಜೆಪಿ ಹೈಕಮಾಂಡ್ಗೆ ದೆಹಲಿ ವಿಧಾನಸಭೆ ಚುನಾವಣೆ ಸೇರಿದಂತೆ ಬೇರೆ ಬೇರೆ ವಿಚಾರಗಳಿದ್ದರು. ಈ ಕಾರಣಕ್ಕಾಗಿ ಕರ್ನಾಟಕ ರಾಜ್ಯ ಬಿಜೆಪಿ ಬಗ್ಗೆ ಗಮನಹರಿಸಿಲ್ಲ. ಈಗ ಅದೆಲ್ಲವೂ ಸರಿಯಾಗಲಿದೆ. ಇಂತಹ ಬೆಳವಣಿಗೆಗಳಿಂದಾಗಿ ಕಾರ್ಯಕರ್ತರೂ ರೋಸಿ ಹೋಗಿದ್ದಾರೆ. ಎಲ್ಲವೂ ಶೀಘ್ರವೇ ಸರಿಯಾಗಲಿದೆ ಎಂದು ರವಿಕುಮಾರ ಹೇಳಿದರು.