Home ತಾಜಾ ಸುದ್ದಿ ಒಳ್ಳೆಯ ಕೆಲಸ ಮಾಡುವ ಮನಸ್ಸಿಲ್ಲ: ಇನ್ನೊಬ್ಬರು ಮಾಡಿದರೆ ಅದನ್ನೂ ಸಹಿಸಲ್ಲ

ಒಳ್ಳೆಯ ಕೆಲಸ ಮಾಡುವ ಮನಸ್ಸಿಲ್ಲ: ಇನ್ನೊಬ್ಬರು ಮಾಡಿದರೆ ಅದನ್ನೂ ಸಹಿಸಲ್ಲ

0

ಬೆಂಗಳೂರು: ರಾಜ್ಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನಔಷಧಿ ಕೇಂದ್ರಗಳನ್ನ ಮುಚ್ಚುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಆದೇಶ ಅತ್ಯಂತ ಜನವಿರೋಧಿ ನಡೆಯಾಗಿದ್ದು, ಇದು ರಾಜಕೀಯ ಪ್ರೇರಿತ ನಿರ್ಧಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದ್ದಾರೆ.

ಬಡವರು, ಜನಸಾಮಾನ್ಯರಿಗೆ ಅಗ್ಗದ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಒದಗಿಸುತ್ತಿರುವ ಜನ ಔಷಧಿ ಕೇಂದ್ರಗಳಿಗೆ ಅವಕಾಶ ನೀಡದಿರಲು ಕಾರಣವೇನು? ಸರ್ಕಾರಿ ಆಸ್ಪತ್ರೆಗಳ ವೈದ್ಯರು ಜೆನೆರಿಕ್ ಔಷಧಿ ಚೀಟಿ ಬರೆಯುವುದಕ್ಕೂ ಜನಔಷಧಿ ಕೇಂದ್ರಗಳಿಗೆ ಅವಕಾಶ ನೀಡದಿರುವುದಕ್ಕೂ ಸಂಬಂಧವೇನು?

ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಡಿಮೆ ದರದಲ್ಲಿ ಆಹಾರ ಸಿಗುತ್ತದೆ ಎನ್ನುವ ಕಾರಣಕ್ಕೆ ಬೇರೆ ಹೋಟೆಲ್‌ಗಳು ತೆರೆಯಲು ಅವಕಾಶ ನೀಡುವುದಿಲ್ಲ ಎನ್ನುವುದಕ್ಕೆ ಸಾಧ್ಯವೇ? ಜನರು ತಮಗೆ ಸಕಾಲಕ್ಕೆ, ಕೈಗೆಟಕುವ ಬೆಲೆಗೆ, ಉತ್ತಮ ಗುಣಮಟ್ಟದ ಔಷಧಿ ಎಲ್ಲಿ ಸಿಗುತ್ತದೋ ಅಲ್ಲಿ ಖರೀದಿ ಮಾಡುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಕ್ಕರೆ ಅದನ್ನೇ ಪಡೆಯುತ್ತಾರೆ. ಅದಕ್ಕಾಗಿ ಜನಔಷಧಿ ಕೇಂದ್ರಗಳನ್ನ ಮುಚ್ಚುವ ಅವಶ್ಯಕತೆ ಏನಿದೆ?

ಸಿಎಂ ಸಿದ್ದರಾಮಯ್ಯನವರೇ, ರಾಜ್ಯ ಸರ್ಕಾರ ಕಾರ್ಪೊರೇಟ್ ಔಷಧ ಕಂಪನಿಗಳು, ಖಾಸಗಿ ಮೆಡಿಕಲ್ ಶಾಪ್‌ಗಳು ಲಾಬಿಗೆ ಮಣಿದು ಜನ ಔಷಧಿ ಕೇಂದ್ರಗಳಿಗೆ ಅವಕಾಶ ನೀಡುತ್ತಿಲ್ಲವೋ ಅಥವಾ ಪ್ರಧಾನಮಂತ್ರಿಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತಿದೆ ಎಂಬ ಅಸೂಯೆಯೋ?

ಈಗ ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಬರೆದುಕೊಟ್ಟ ಚೀಟಿಯಲ್ಲಿರುವ ಔಷಧಿ ಸ್ಟಾಕ್ ಇಲ್ಲದಿದ್ದರೆ ಪಾಪ ಬಡವರು ಏನು ಮಾಡಬೇಕು? ಅದರಿಂದ ಏನಾದರೂ ಅನಾಹುತ ಆದರೆ ಅದಕ್ಕೆ ಯಾರು ಹೊಣೆ? ಈ ನಾಲಾಯಕ್ ಕಾಂಗ್ರೆಸ್‌ ಸರ್ಕಾರಕ್ಕೆ ಜನರಿಗೆ ಒಳ್ಳೆಯದಾಗುವ ಕೆಲಸ ಮಾಡುವ ಮನಸ್ಸಿಲ್ಲ. ಇನ್ನೊಬ್ಬರು ಮಾಡಿದರೆ ಅದನ್ನೂ ಸಹಿಸಲ್ಲ. ಈ ಪಾಪಿ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಶಾಪ ತಟ್ಟದೇ ಇರದು ಎಂದಿದ್ದಾರೆ.

Exit mobile version