‘ಕಾಂತಾರ’ ವಿವಾದ: ಬಾಲಿವುಡ್ನ ‘ಎನರ್ಜಿಟಿಕ್ ಸ್ಟಾರ್’ ರಣವೀರ್ ಸಿಂಗ್, ತಮ್ಮ ಅತಿಯಾದ ಉತ್ಸಾಹದಿಂದ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಆದರೆ ಈ ಬಾರಿ ಅವರು ಕನ್ನಡಿಗರ, ಅದರಲ್ಲೂ ಕರಾವಳಿಯ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದರು.
ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ನಟ ರಿಷಬ್ ಶೆಟ್ಟಿಯವರನ್ನು ಹೊಗಳುವ ಭರದಲ್ಲಿ ‘ಕಾಂತಾರ’ದ ದೈವವನ್ನು ಅನುಕರಣೆ ಮಾಡಿದ್ದು ಮತ್ತು ದೈವವನ್ನು ‘ದೆವ್ವ’ ಎಂದು ಕರೆದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಎಚ್ಚೆತ್ತುಕೊಂಡಿರುವ ನಟ, ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಕ್ಷಮೆ ಕೋರಿದ ರಣವೀರ್: ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಣವೀರ್, “ರಿಷಬ್ ಅಭಿನಯವನ್ನು ಎತ್ತಿ ತೋರಿಸುವುದು ಮತ್ತು ಹೊಗಳುವುದು ಮಾತ್ರ ನನ್ನ ಉದ್ದೇಶವಾಗಿತ್ತು. ಆ ನಿರ್ದಿಷ್ಟ ದೃಶ್ಯದಲ್ಲಿ (ದೈವ ಆವಾಹನೆ) ನಟಿಸುವುದು ಒಬ್ಬ ನಟನಾಗಿ ಎಷ್ಟು ಸವಾಲಿನ ಕೆಲಸ ಎಂಬುದು ನನಗೆ ಚೆನ್ನಾಗಿ ತಿಳಿದಿದೆ.
ನಾನು ಭಾರತದ ಪ್ರತಿಯೊಂದು ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಗೌರವಿಸುತ್ತೇನೆ. ನನ್ನ ವರ್ತನೆಯಿಂದ ಯಾರಿಗಾದರೂ ನೋವಾಗಿದ್ದರೆ, ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ,” ಎಂದು ಬರೆದುಕೊಂಡಿದ್ದಾರೆ.
ಏನಿದು ಎಡವಟ್ಟು?: ಗೋವಾದಲ್ಲಿ ನಡೆದ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ್ದ ರಣವೀರ್, ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಪ್ರಸ್ತಾಪಿಸಿದ್ದರು. ಈ ವೇಳೆ ಪಂಜುರ್ಲಿ ದೈವದ ಆವಾಹನೆಯನ್ನು ಅವರು “ಹೆಣ್ಣು ದೆವ್ವ” (Female Ghost) ಎಂದು ಸಂಬೋದಿಸಿ, ದೈವದ ಹಾವಭಾವವನ್ನು ಅಣಕಿಸುವಂತೆ ಅನುಕರಣೆ ಮಾಡಿದ್ದರು. ತುಳುನಾಡು ಅತ್ಯಂತ ಭಕ್ತಿಯಿಂದ ಆರಾಧಿಸುವ ಶಕ್ತಿಯನ್ನು ‘ದೆವ್ವ’ ಎಂದು ಕರೆದಿದ್ದು ಭಕ್ತರ ಮತ್ತು ದೈವಾರಾಧಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಪೊಲೀಸ್ ದೂರು ದಾಖಲು: ರಣವೀರ್ ಈ ನಡೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿಯು ದೂರು ದಾಖಲಿಸಿದೆ. ಸಮುದಾಯ ಆರಾಧಿಸುವ ಚಾಮುಂಡಿ ದೇವಿ ಅಥವಾ ದೈವವನ್ನು ಅವಮಾನಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಈ ಘಟನೆ ನಡೆದಾಗ ಮುಂಭಾಗದಲ್ಲೇ ಕುಳಿತಿದ್ದ ರಿಷಬ್ ಶೆಟ್ಟಿ ನಗುತ್ತಿದ್ದರು ಎಂಬಂತೆ ವಿಡಿಯೋ ಎಡಿಟ್ ಮಾಡಿ ಹರಿಬಿಡಲಾಗಿತ್ತು. ಆದರೆ ರಿಷಬ್ ಬೇರೆ ಸಂದರ್ಭದಲ್ಲಿ ನಕ್ಕಿದ್ದನ್ನು, ಈ ದೃಶ್ಯಕ್ಕೆ ಜೋಡಿಸಿ ತಪ್ಪು ಮಾಹಿತಿ ಹರಡಲಾಗಿದೆ ಎಂಬುದು ತಿಳಿದುಬಂದಿದೆ.


























