Home ನಮ್ಮ ಜಿಲ್ಲೆ ಉತ್ತರ ಕನ್ನಡ ಆರೋಗ್ಯ ಸೌಲಭ್ಯ ಹತ್ತನೇ ಗ್ಯಾರಂಟಿ ಆಗಿದೆ : DCM ಡಿ.ಕೆ.ಶಿವಕುಮಾರ್

ಆರೋಗ್ಯ ಸೌಲಭ್ಯ ಹತ್ತನೇ ಗ್ಯಾರಂಟಿ ಆಗಿದೆ : DCM ಡಿ.ಕೆ.ಶಿವಕುಮಾರ್

0
ಆರೋಗ್ಯ ಸೌಲಭ್ಯ ಹತ್ತನೇ ಗ್ಯಾರಂಟಿ ಆಗಿದೆ : DCM ಡಿ.ಕೆ.ಶಿವಕುಮಾರ್

ದಾಂಡೇಲಿ (ಉತ್ತರ ಕನ್ನಡ): ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವ ಮೂಲಕ ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರದ 10ನೇ ಗ್ಯಾರಂಟಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕಾರವಾರದ ಮೆಡಿಕಲ್ ಕಾಲೇಜು ನೂತನ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದರು. “ಇಂದು 13 ಸಾವಿರಕ್ಕೂ ಹೆಚ್ಚು ಯುವಕ-ಯುವತಿಯರು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಮಂಗಳೂರಿನಲ್ಲಿ ಮಾತ್ರ 14 ಮೆಡಿಕಲ್ ಕಾಲೇಜುಗಳಿವೆ. ದೇಶದ ಯಾವುದೇ ರಾಜ್ಯದಲ್ಲಿಲ್ಲದಷ್ಟು ಮೆಡಿಕಲ್ ಕಾಲೇಜುಗಳು ಕರ್ನಾಟಕದಲ್ಲಿವೆ. ನಾವು ದೇಶದ ಹಾಗೂ ವಿದೇಶಗಳ ಆರೋಗ್ಯ ರಾಯಭಾರಿಗಳಾಗಿದ್ದೇವೆ,” ಎಂದು ಅವರು ಹೇಳಿದರು.

ಇದನ್ನೂ ಓದಿ: ಎಲ್ ಮೆಂಚೊ’ ಎನ್‌ಕೌಂಟರ್: ಮೆಕ್ಸಿಕೋದಲ್ಲಿ ಭುಗಿಲೆದ್ದ ಹಿಂಸಾಚಾರ – ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ!

ರಾಜ್ಯ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ ಅವರು, “1.11 ಕೋಟಿ ಜನರಿಗೆ ಭೂ ದಾಖಲೆ ವಿತರಿಸಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಮಹತ್ವದ ಸಾಧನೆ,” ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದ ಡಿ.ಕೆ. ಶಿವಕುಮಾರ್, “ನಾವು ಮಾಡಿದ ಕೆಲಸಗಳೇ ನಮ್ಮ ಸಾಕ್ಷಿ. ಕಟ್ಟಡ ನಿರ್ಮಾಣ ಮಾತ್ರವಲ್ಲ, ಜನರ ನಂಬಿಕೆ ಗಳಿಸುವುದು ಮುಖ್ಯ. ನಾನು 36 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರವೂ ಇದೆ,” ಎಂದರು.

ಇದನ್ನೂ ಓದಿ: ‘ಗುಲಾಮಗಿರಿಯ ಸಂಕೇತಗಳಿಂದ ಮುಕ್ತಿ’: ರಾಜಾಜಿ ಪ್ರತಿಮೆ ಇಂದು ರಾಷ್ಟ್ರಪತಿ ಭವನದಲ್ಲಿ ಅನಾವರಣ

“ದುಡ್ಡು ಬ್ಲಡ್ ಸರ್ಕ್ಯುಲೇಟ್ ಆಗುವಂತೆ ಜನರ ಕೈಗೆ ತಲುಪಬೇಕು” ಎಂಬ ಸಾಯಿಬಾಬಾ ಮಾತನ್ನು ನೆನಪಿಸಿಕೊಂಡ ಡಿ.ಕೆ.ಶಿ., ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಟೀಕಿಸಿದ್ದರೂ ಈಗ ಅದನ್ನೇ ಅನುಸರಿಸುತ್ತಿದೆ ಎಂದು ಟೀಕಿಸಿದರು. “ಹೆಬ್ಬಾರ್ ನಮ್ಮ ಸರ್ಕಾರಕ್ಕೆ ಸಿಕ್ಕ ಗಿಫ್ಟ್,” ಎಂದು ಅವರು ಹೇಳಿದರು. ಉತ್ತರ ಕನ್ನಡ ಜಿಲ್ಲೆಗೆ 2000 ಕೋಟಿ ರೂ. ಅನುದಾನ ಹರಿದು ಬಂದಿದೆ ಎಂದೂ ತಿಳಿಸಿದರು.

ಆರ್.ವಿ. ದೇಶಪಾಂಡೆ ಮನವಿ: ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, “2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಈ ಮೆಡಿಕಲ್ ಕಾಲೇಜಿಗೆ ಅಡಿಗಲ್ಲು ಹಾಕಲಾಗಿತ್ತು. ಇಂದು ಇದು ವೈದ್ಯಕೀಯ ವಿಜ್ಞಾನ ಸಂಸ್ಥೆಯಾಗಿ ಬೆಳೆದಿದೆ,” ಎಂದರು. ಕಾರವಾರ, ಹಳಿಯಾಳ ಮತ್ತು ಭಟ್ಕಳದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿದ್ದು, ಜಿಲ್ಲೆಯಲ್ಲಿನ ಶೈಕ್ಷಣಿಕ ಸೌಲಭ್ಯಗಳು ಉತ್ತಮವಾಗಿವೆ ಎಂದು ಹೇಳಿದರು.

ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವ, ರಾಜಕೀಯ ಚಾಣಕ್ಯ ಮುಕುಲ್ ರಾಯ್ ನಿಧನ

ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ನೀಡಬೇಕು ಎಂದು ಅವರು ವಿನಯಪೂರ್ವಕವಾಗಿ ಒತ್ತಾಯಿಸಿದರು. ಕುಣಬಿ ಜನಾಂಗವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದೂ ತಿಳಿಸಿದರು.

ಒಟ್ಟಾರೆ, ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭವು ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿದ್ದು, ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ಸೌಲಭ್ಯ ದೊರೆಯುವ ವಿಶ್ವಾಸ ವ್ಯಕ್ತವಾಗಿದೆ.