ದಾವಣಗೆರೆ: ರಾಜ್ಯದ ಹಲವೆಡೆ ಡಿಜೆ ಸಹಿತ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿದ್ದರೂ ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ಅಘೋಷಿತ ತುರ್ತು ಪರಿಸ್ಥಿತಿ ಮತ್ತು ಇಂದಿರಾಗಾಂಧಿ ಮನಸ್ಥಿತಿ ರೀತಿ ಡಿಜೆಗೆ ನಿರ್ಬಂಧ ಹಾಕಿದ್ದಾರೆ. ಇವರು ಹೇಳಿದಂತೆ ಕೇಳಲು ದಾವಣಗೆರೆಯೇನು ಶಾಮನೂರು ಕುಟುಂಬದ ಆಸ್ತಿಯಾ ಎಂದು ಮೈಸೂರು ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಗಣೇಶ ವಿಸರ್ಜನೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮೈಸೂರು, ಚಿತ್ರದುರ್ಗ, ತುಮಕೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಡಿಜೆಯೊಂದಿಗೆ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆದಿದೆ. ಆದರೆ, ದಾವಣಗೆರೆಯಲ್ಲಿ ಮಾತ್ರ ಡಿಜೆ, ಬಾಜ ಭಜಂತ್ರಿ, ಮೈಕ್ ಸೆಟ್ಗೆಲ್ಲಾ ನಿರ್ಬಂಧ ಹಾಕಲಾಗಿದೆ ಏನಿದು ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಇವರಿಗೇನು ದಾವಣಗೆರೆ ಬರೆದುಕೊಟ್ಟಿದ್ದಾರಾ? ಇದೇನು ನಿಮ್ಮ ಲೇಔಟಾ ಎಂದು ಪ್ರಶ್ನಿಸಿದರು.
ಒಂದು ಮೈಕ್ ಕಟ್ಟಲು ಅವಕಾಶವಿಲ್ಲ ಎಂದರೆ ಏನು ಮಾಡಲು ಹೊರಟಿದ್ದೀರಿ ಮಲ್ಲಿಕಾರ್ಜುನ್ ನೀವು? ಇದೇನು ನಿಮ್ಮ ಮನಸ್ಸಿಗೆ ಬಂದಂತೆ ಮಾಡಲು ಜಿಂಕೆ ಸೇರಿದಂತೆ ಬೇರೆ ಪ್ರಾಣಿಗಳನ್ನು ಹೊಡೆದಾಕಿ ತಿಂದಂತಲ್ಲ. ಇದು ಸಾರ್ವಜನಿಕರಿಗೆ ಸೇರಿದ ಸ್ಥಳ. ನಿಮ್ಮ ಫ್ಯಾಕ್ಟರಿಯಲ್ಲಿ ನಿಮ್ಮ ಅಧಿಕಾರ ನಡೆಸಲು ಎಂದು ಕುಟುಕಿದರು.
ಗಣೇಶೋತ್ಸವವನ್ನು ಬಾಜ-ಭಜಂತ್ರಿ, ಸಂಗೀತದೊಂದಿಗೆ ನಡಿಬೇಕು. ಕಾಂಗ್ರೆಸ್ನಲ್ಲಿ ಮಹಾತ್ಮಗಾಂಧಿಗಿಂತ ಮೊದಲು ಬಾಲಗಂಗಾಧರ ತಿಲಕರು ಗಣೇಶೋತ್ಸವ ಆರಂಭಿಸಿದ್ದು. ಅವರ ಕಾಲದಲ್ಲಿ ಸಂಗೀತ, ಹಾಸ್ಯ, ಪ್ರಹಸನ ಎಲ್ಲವೂ ನಡೆಯುತ್ತಿತ್ತು. ಬಾಲಗಂಗಾಧರರು ಹಾಕಿಕೊಟ್ಟ ಮೇಲ್ಪಂಕಿ. ಅಂತಹ ಗಣೇಶ ಕಾರ್ಯಕ್ರಮವನ್ನು ನೀವು ಹೇಳಿದಂತೆ ಕೇಳಬೇಕು ಎನ್ನಲು ಇದೇನು ನಿಮ್ಮ ಶಿಕ್ಷಣ ಸಂಸ್ಥೆಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ.ಎಂ. ಸಿದ್ದೇಶ್ವರ್ ಅಧಿಕಾರದಲ್ಲಿದ್ದಾಗ ಚಿತ್ರದುರ್ಗದ ಮಾದರಿಯಲ್ಲಿ ದಾವಣಗೆರೆ ಗಣೇಶೋತ್ಸವ ನಡೆಯುತ್ತಿತ್ತು. ಈಗ ಯಾವ ರೀತಿ ನಡೆಯುತ್ತಿದೆ ಎಂದು ಯೋಚಿಸಿ. ದಾವಣಗೆರೆ ಜನರು ಇಂಥವರನ್ನು ಆಯ್ಕೆ ಮಾಡಿ ಈಗ ತಪ್ಪು ಮಾಡಿದ್ದಾರೆ. ಮುಂದೆ ಇಂಥ ತಪ್ಪಾಗದಂತೆ 2028ರಲ್ಲಿ ಇವರು ಕುಟುಂಬ ಸಮೇತ ಇವರ ಶಾಲೆ ಕಾಂಪೌಂಡ್ನಲ್ಲಿರಬೇಕು ಆ ರೀತಿ ಇವರನ್ನು ಸೋಲಿಸಿ ಎಂದು ಕರೆಕೊಟ್ಟರು.