ದಾವಣಗೆರೆ: ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಪೊಲೀಸರ ತನಿಖಾ ಲೋಪಕ್ಕೆ ಬೇಸತ್ತು ರಸಗೊಬ್ಬರ ಅಂಗಡಿಯ ಮಾಲೀಕನೊಬ್ಬ ಜಿಲ್ಲಾ ಪೊಲಿಸ್ ಕಚೇರಿ ಮುಂಭಾಗವೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ಜಿಎಂಸಿ ರಸಗೊಬ್ಬರ ಅಂಗಡಿ ಮಾಲೀಕ ಶಿವಲಿಂಗಯ್ಯ ಆತ್ಮಹತ್ಯೆಗೆ ಯತ್ನಿಸಿದ್ದು ಆತನ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹರಪನಹಳ್ಳಿ ತಾಲೂಕಿನ ಗಡಿಗುಡಾಳು ಗ್ರಾಮದ ಶಿವಲಿಂಗಯ್ಯ 5 ಕೋಟಿ, 55 ಲಕ್ಷ ರೂ, ವಂಚನೆಗೆ ಒಳಗಾಗಿದ್ದ. ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ 2022 ರಲ್ಲಿ ವಂಚನೆ ಪ್ರಕರಣ ದಾಖಲಿಸಿ, ನ್ಯಾಯಕ್ಕೆ ಮನವಿ ಮಾಡಿದ್ದ.
ಈಗ್ಗೆ ಸುಮಾರು ಎರಡ್ಮೂರು ತಿಂಗಳ ಹಿಂದೆಯೇ ಎಸ್ಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಹೇಳಿದಾಗ ಆತನಿಗೆ ಪರವಾನಿಗೆ ದೊರೆತಿರಲಿಲ್ಲ. ಈಗ ಮತ್ತೆ ಕಳೆದರಡು ದಿನಗಳ ಹಿಂದೆಯೂ ಪ್ರತಿಭಟನೆಗೆ ನಕಾರ ವ್ಯಕ್ತಪಡಿಸಿದಾಗ ನ್ಯಾಯ ಕೊಡಿಸಲಾಗಾದ ಪೊಲೀಸ್ ಇಲಾಖೆ ವಿರುದ್ಧ ಮನನೊಂದು, ನ್ಯಾಯಕ್ಕೆ ಅಲೆದರೂ ಎಸ್ಪಿ ಉಮಾ ಪ್ರಶಾಂತ್ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪೊಲೀಸರ ವಿರುದ್ಧ ಪತ್ನಿ ಶ್ವೇತಾ, ತಂದೆ ಚನ್ನಬಸಯ್ಯ ಆರೋಪಿಸಿದ್ದು, ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾರೆ.
