Home ಕ್ರೀಡೆ ಆಳ್ವಾಸ್‌ನಲ್ಲಿ 85ನೇ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್

ಆಳ್ವಾಸ್‌ನಲ್ಲಿ 85ನೇ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್

0
ಆಳ್ವಾಸ್‌ನಲ್ಲಿ 85ನೇ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್

6ನೇ ಬಾರಿ ಆಳ್ವಾಸ್ ಆತಿಥ್ಯ: ದೇಶದ 312ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿಂದ 4,288ಕ್ಕೂ ಹೆಚ್ಚು ಅಥ್ಲೀಟ್‌ಗಳು – 1,000ಕ್ಕೂ ಹೆಚ್ಚು ಕ್ರೀಡಾಧಿಕಾರಿಗಳು ಭಾಗಿ

ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಹಾಗೂ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್ (AIU) ಸಹಭಾಗಿತ್ವದಲ್ಲಿ 85ನೇ ಅಖಿಲ ಭಾರತ ಪುರುಷ ಹಾಗೂ ಮಹಿಳಾ ಅಂತರ್‌ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ – 2026 ಅನ್ನು ಇಂದಿನಿಂದ 16ರವರೆಗೆ ಆಯೋಜಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.

ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ದೇಶದ 312ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿಂದ 4,288ಕ್ಕೂ ಹೆಚ್ಚು ಅಥ್ಲೀಟ್‌ಗಳು ಹಾಗೂ ಸುಮಾರು 1,000ಕ್ಕೂ ಹೆಚ್ಚು ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:  ಬಡವರ ಸೇಬು ಖ್ಯಾತಿಯ ಬಾರೆ ಹಣ್ಣು: ರೈತರ ಬದುಕಿಗೆ ಹೊಸ ದಿಕ್ಕು

ಸುಸಜ್ಜಿತ ಕ್ರೀಡಾಂಗಣ – ಅತ್ಯಾಧುನಿಕ ತಂತ್ರಜ್ಞಾನ: ಕ್ರೀಡಾಕೂಟವು ಅತ್ಯಾಧುನಿಕ ಸಿಂಥಟಿಕ್ ಟ್ರ್ಯಾಕ್‌ನಲ್ಲಿ, ಹೊನಲು ಬೆಳಕಿನ ವ್ಯವಸ್ಥೆಯೊಂದಿಗೆ ನಡೆಯಲಿದೆ. ಸ್ಪರ್ಧೆಗಳ ಫಲಿತಾಂಶಗಳಲ್ಲಿ ಪಾರದರ್ಶಕತೆ ಮತ್ತು ನಿಖರತೆ ಕಾಯ್ದುಕೊಳ್ಳಲು ಅತ್ಯಾಧುನಿಕ ಫೋಟೋ ಫಿನಿಶಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಕ್ರೀಡಾಕೂಟವನ್ನು ಖೇಲೋ ಇಂಡಿಯಾ ಹಾಗೂ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಗಳಿಗೆ ಮಾನದಂಡವಾಗಿ ಪರಿಗಣಿಸಲಾಗುತ್ತದೆ.

ಪ್ರತಿದಿನ ಸಂಜೆ ರಾತ್ರಿ 7 ಗಂಟೆಗೆ ಭವ್ಯ ವಿಜಯ ವೇದಿಕೆಯಲ್ಲಿ ಪದಕ ವಿಜೇತರನ್ನು ಗೌರವಿಸಲಾಗುವುದು ಎಂದು ಡಾ. ಮೋಹನ್ ಆಳ್ವ ಮಾಹಿತಿ ನೀಡಿದ್ದಾರೆ.

ಉದ್ಘಾಟನಾ ಸಮಾರಂಭ – ಜ.12 ಸಂಜೆ 4.30ಕ್ಕೆ: ಜನವರಿ 12ರಂದು ಸಂಜೆ 4.30ಕ್ಕೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಉದ್ಘಾಟನೆ ನೆರವೇರಿಸಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ:  ಒಕ್ಕಲುತನದ ಹೆಸರೇ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ

ಮುಖ್ಯ ಅತಿಥಿಗಳಾಗಿ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ

ಅಧ್ಯಕ್ಷತೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಧ್ವಜಾರೋಹಣ: ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ

ಇತರ ಗಣ್ಯ ಅತಿಥಿಗಳಾಗಿ: ಮೂಲ್ಕಿ–ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಕೂಡ್ಲಿಗಿ ಶಾಸಕ ಹಾಗೂ RGUHS ಸೆನೆಟ್ ಸದಸ್ಯ ಡಾ. ಶ್ರೀನಿವಾಸ ಎನ್.ಟಿ., ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ವಿಧಾನಪರಿಷತ್ ಸದಸ್ಯರು ಪುಟ್ಟಣ್ಣ, ಗೋವಿಂದರಾಜ್, ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಥೋಡ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಭವ್ಯ ಸಾಂಸ್ಕೃತಿಕ ಮೆರವಣಿಗೆ: ಜನವರಿ 12ರಂದು ಮಧ್ಯಾಹ್ನ 4.30ಕ್ಕೆ ನಮ್ಮ ದೇಶದ ವೈವಿಧ್ಯಮಯ ಕಲೆ–ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ವಿವಿಧ ರಾಜ್ಯಗಳ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಪಥಸಂಚಲನದ ನಂತರ ಉದ್ಘಾಟನಾ ಸಮಾರಂಭ ನಡೆಯಲಿದೆ.

ಇದನ್ನೂ ಓದಿ:  ಭಾರತೀಯ ಅಂತರಿಕ್ಷ ನಿಲ್ದಾಣಕ್ಕೆ ಶತಪ್ರಯತ್ನ

ವಿಜೇತರಿಗೆ 20 ಲಕ್ಷಕ್ಕೂ ಅಧಿಕ ನಗದು ಪುರಸ್ಕಾರ: ಕ್ರೀಡಾಕೂಟದಲ್ಲಿ ವಿಜೇತರಿಗಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ₹20 ಲಕ್ಷಕ್ಕೂ ಅಧಿಕ ಮೊತ್ತದ ನಗದು ಬಹುಮಾನ ಘೋಷಿಸಿದೆ. ಪ್ರಥಮ ಸ್ಥಾನ – ₹15,000. ದ್ವಿತೀಯ ಸ್ಥಾನ – ₹10,000. ತೃತೀಯ ಸ್ಥಾನ – ₹5,000. ಕೂಟ ದಾಖಲೆ ನಿರ್ಮಿಸಿದವರಿಗೆ – ₹25,000. ಸಮಗ್ರ ಪ್ರಶಸ್ತಿ ವಿಜೇತ ತಂಡ – ₹50,000. ರನ್ನರ್-ಅಪ್ ತಂಡ – ₹30,000. ತೃತೀಯ ಸ್ಥಾನ ತಂಡ – ₹20,000.

6ನೇ ಬಾರಿ ಆಳ್ವಾಸ್ ಆತಿಥ್ಯ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಇದುವರೆಗೆ 6ನೇ ಬಾರಿ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಆಯೋಜಿಸುತ್ತಿದೆ. ಈ ಹಿಂದೆ 72, 75, 80ನೇ ಕೂಟಗಳನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಹಾಗೂ 79, 81ನೇ ಕೂಟಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಆಯೋಜಿಸಿತ್ತು. ಇದೀಗ 85ನೇ ಕೂಟವನ್ನು RGUHS ಆಶ್ರಯದಲ್ಲಿ 4ನೇ ಬಾರಿ ಆಯೋಜಿಸಲಾಗುತ್ತಿದೆ.

ಇದನ್ನೂ ಓದಿ:  ʼರಕ್ಕಸಪುರ’ದಿಂದ ಬಂದ ʼನೀನಾ… ನೀನೇನಾʼ ಮೆಲೋಡಿ ಹಾಡು

ಸುದ್ದಿಗೋಷ್ಠಿಯಲ್ಲಿ RGUHS ಸಿಂಡಿಕೇಟ್ ಸದಸ್ಯರಾದ ಡಾ. ಇಪ್ತಿಕರ್ ಅಲಿ, ಡಾ. ಶಿವಶರಣ್, ಸೆನೆಟ್ ಸದಸ್ಯೆ ಡಾ. ವೈಶಾಲಿ ಶ್ರೀಜಿತ್, ಉಪಕುಲಪತಿ ಡಾ. ಬಿ. ವಸಂತ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.