ಹುಬ್ಬಳ್ಳಿ: ರಾಹುಲ ಗಾಂಧಿ ಅವರ ಶಿಕ್ಷೆಯನ್ನು ನ್ಯಾಯಾಲಯ ತಡೆದಿರಬಹುದು. ಆದರೆ, ಅವರು ಮಾಡಿದ್ದು ಸರಿ ಎಂದು ಒಪ್ಪಿಕೊಂಡಿಲ್ಲ. ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಸ್ಪೀಕರ್, ರಾಹುಲ ಗಾಂಧಿ ಅವರ ಸಂಸದ ಸ್ಥಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳೀದ್ದಾರೆ.
ಹುಬ್ಬಳ್ಳಿ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ವಿಚಾರ ಆಗಿರುವುದರಿಂದ ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ವರ್ಗಾವಣೆ ವಿಚಾರದಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿವೆ. ಬಿಜೆಪಿ ಮೇಲೆ ಕಾಂಗ್ರೆಸ್ ಮಾಡಿದ್ದ ಆರೋಪಕ್ಕಿಂತ ಹತ್ತು ಪಟ್ಟು ಭ್ರಷ್ಟಾಚಾರ ನಡೆಯುತ್ತಿದೆ. ೧೦, ೧೨ ಲಕ್ಷ ಕೊಟ್ಟವರಿಗೆ ವರ್ಗಾವಣೆ ಮಾಡಲಾಗುತ್ತಿದೆ. ಧಾರವಾಡಲ್ಲೂ ವರ್ಗಾವಣೆ ಹರಾಜು ಪ್ರಕ್ರಿಯೆ ನಡೆದಿದೆ. ಅಧಿಕಾರಿಗಳು ನನಗೆ ವಯಕ್ತಿಕವಾಗಿ ಕರೆ ಮಾಡಿ ನೋವು ತೋಡಿಕೊಳ್ಳುತ್ತಿದ್ದಾರೆ ಎಂದರು.
ಉಡುಪಿ ಹಾಸ್ಟೆಲ್ ವಿಡಿಯೋ ಮತ್ತು ಹುಬ್ಬಳ್ಳಿ ಕಾಲೇಜು ಪೋಸ್ಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಮಾಜ ವಿದ್ರೋಹಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಏನು ಮಾಡಿದರು ಕಾಂಗ್ರೆಸ್ ಸಂರಕ್ಷಣೆ ಮಾಡುತ್ತದೆ ಎಂಬ ಮನೋಭಾವ ಮೂಡಿದೆ. ಹೀಗಾಗಿ ಇಂತಹ ಕೃತ್ಯ ನಡೆಯುತ್ತಿದೆ ಎಂದದು ಆಕ್ರೋಷ ವ್ಯಕ್ತಪಡಿಸಿದರು.
ಅರಗ ಜ್ಞಾನೇಂದ್ರ, ಖರ್ಗೆ ಮತ್ತು ಕಲ್ಯಾಣ ಕರ್ನಾಟಕದ ಅವಹೇಳನಕಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಖರ್ಗೆಯವರ ಬಗ್ಗೆ ಜ್ಞಾನೇಂದ್ರ ಆ ರೀತಿ ಮಾತನಾಡಬಾರದಿತ್ತು. ರಾಜಕೀಯ ವಿಚಾರವಾಗಿ ಖರ್ಗೆ ಮತ್ತು ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ಆದರೆ, ವೈಯಕ್ತಿಕವಾಗಿ ಖರ್ಗೆ ಅನುಭವ, ಹಿರಿತನದ ಬಗ್ಗೆ ಗೌರವವಿದೆ. ಯಾವುದೇ ವ್ಯಕ್ತಿ ಮೈ ಬಣ್ಣ, ಪ್ರದೇಶ ನೋಡಿ ಮಾತನಾಡುವುದು ಸರಿಯಲ್ಲ. ಈ ಕುರಿತು ನಾನು ಜ್ಞಾನೇಂದ್ರಗೆ ತಿಳಿ ಹೇಳುತ್ತೇನೆ ಎಂದರು.