ಗೃಹಲಕ್ಷ್ಮೀ ಯೋಜನೆಗೆ ಹಣ ವಸೂಲಿ: ಮೂರು ಗ್ರಾಮ ಒನ್ ಕೇಂದ್ರ ನಿಷ್ಕ್ರೀಯ

0
15

ಬಾಗಲಕೋಟೆ: ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಲು ಸಾರ್ವಜನಿಕರಿಂದ ಹಣ ಪೀಕುತ್ತಿದ್ದ ಹಲವು ಗ್ರಾಮ ಒನ್ ಸೆಂಟರ್‌ಗಳ ತಂತ್ರಾಂಶ ಬಳಕೆಯನ್ನು ಜಿಲ್ಲಾಡಳಿತ ನಿಷ್ಕ್ರೀಯಗೊಳಿಸಿದೆ.
ಈ ಬಗ್ಗೆ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜನರಿಂದ ಹಣವಸೂಲಿ ಮಾಡಕೂಡದು ಎಂಬ ಎಚ್ಚರಿಕೆಯನ್ನು ನೀಡಲಾಗಿತ್ತು. ಆ ಎಚ್ಚರಿಕೆ ನಂತರವೂ ಹಲವು ಕೇಂದ್ರಗಳು ವಸೂಲಿಗೆ ಇಳಿದಿದ್ದರಿಂದ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅವರ ಸೂಚನೆ ಮೇರೆಗೆ ಕಾರ್ಯಾಚರಣೆಗೆ ಇಳಿದ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ಒನ್ ಕೇಂದ್ರಗಳಿಗೆ ನೀಡಲಾಗಿದ್ದ ತಂತ್ರಾಂಶ ಬಳಕೆಯ ಲಾಗಿನ್ ಬ್ಲಾಕ್ ಮಾಡಿದ್ದಾರೆ.
ಜಮಖಂಡಿ ಉಪವಿಭಾಗದಲ್ಲಿ ಶೂರ್ಪಾಲಿ ಗ್ರಾಮದ ದಾನಯ್ಯ ಮಠಪತಿ ಅವರ ಗ್ರಾಮ ಒನ್ ಕೇಂದ್ರ ಹಾಗೂ ನಂದಗಾಂವ ಗ್ರಾಮದ ಸಿದ್ದಪ್ಪ ಪೂಜಾರ ಎಂಬುವರಿಗೆ ನೀಡಲಾಗಿದ್ದ ಲಾಗಿನ್ ಐಡಿ ಬ್ಲಾಕ್ ಮಾಡಲಾಗಿದೆ ಎಂದು ಜಮಖಂಡಿ ಎಸಿ ಸಂತೋಷ ಕಾಮಗೊಂಡ ತಿಳಿಸಿದ್ದಾರೆ.
ಬಾಗಲಕೋಟೆ ಉಪವಿಭಾಗದ ಶೀಗಿಕೇರಿ ಗ್ರಾಮದಲ್ಲಿನ ಗ್ರಾಮ ಒನ್ ಸೆಂಟರ್‌ನಲ್ಲೂ ನಿಯಮಗಳು ಉಲ್ಲಂಘನೆ ಕಂಡು ಬಂದ ಹಿನ್ನೆಲೆಯಲ್ಲಿ ಲಾಗಿನ್ ಐಡಿ ಬ್ಲಾಕ್ ಮಾಡಲಾಗಿದೆ ಎಂದು ಬಾಗಲಕೋಟೆ ಎಸಿ ಶ್ವೇತಾ ಬೀಡಿಕರ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದ್ದಾರೆ.

Previous articleಕಿಂಗ್‌ ಕೊಹ್ಲಿ ಭೇಟಿಯಾಗಿ ಭಾವುಕರಾದ ಅಭಿಮಾನಿ
Next articleತಾಂತ್ರಿಕ ನಿರ್ವಹಣೆ: ಗೃಹಲಕ್ಷ್ಮೀ ಫಲಾನುಭವಿಗಳ ನೋಂದಣಿ ಜು.23 ರಂದು ಸ್ಥಗಿತ