ಚಿಕ್ಕಮಗಳೂರು: ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತರೀಕೆರೆ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮಂಜಾನಾಯ್ (45) ಮೃತ ದುರ್ದೈವಿ. ಬ್ಯಾಂಕ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರೈತ ಮಂಜಾನಾಯ್ಕ ಖಾಸಗಿ ಬ್ಯಾಂಕಿನಿಂದ 4.70 ರೂ. ಲಕ್ಷ ಸಾಲ ಪಡೆದಿದ್ದು, ಸಾಲ ಕಟ್ಟುವಂತೆ ಬ್ಯಾಂಕಿನವರು ಲಾಯರ್ ನೋಟಿಸ್ ಕಳುಹಿಸಿದ್ದರು.
ಬ್ಯಾಂಕಿನ ವ್ಯವಸ್ಥಾಪಕ ಕಿರಣ್, ಗುಮಾಸ್ತ ಪಿರೋಜಿ ಕಿರುಕುಳ ನೀಡಿದ್ದಾರೆ ಎಂದು ಕೂಡಾ ಆರೋಪಿಸಲಾಗುತ್ತಿದೆ. ಹಣ ಕಟ್ಟುವಂತೆ ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕ ಪ್ರದೇಶದಲ್ಲಿ ನಿಂದಿಸುತ್ತಿದ್ದರು.
ಮರ್ಯಾದೆಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಮಂಜಾನಾಯ್ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.