ಸಾರಿಗೆ ಸಂಸ್ಥೆ ಬಸ್‌ನಲ್ಲಿ ಗೋಮಾಂಸ..!

ಬಾಗಲಕೋಟೆ: ರಾಜ್ಯ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನವನಗರ ಬಸ್ ನಿಲ್ದಾಣದಲ್ಲಿ ಜರುಗಿದೆ.
ತಾಳಿಕೋಟಿಯಿಂದ ಹುಬ್ಬಳ್ಳಿ ಕಡೆಗೆ ಹೊರಟ್ಟಿದ್ದ ಬಸ್‌ನಲ್ಲಿ ಚೀಲದಲ್ಲಿ ಗೋಮಾಂಸ ತುಂಬಿಕೊಂಡು ಬಂದಿದ್ದು, ಅದರ ದುರ್ವಾಸನೆ ಹರಡಿದೆ. ಆಗ ಬಸ್ ನಿರ್ವಾಹಕರು ಅದನ್ನು ಆಕ್ಷೇಪಿಸಿದ್ದು, ಮುಂದೆ ಬಸ್ ನವನಗರಕ್ಕೆ ಬರುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದೌಡಾಯಿಸಿದ್ದಾರೆ. ಘಟನೆಯಲ್ಲಿ ಮಹಿಳೆಯೂ ಭಾಗಿಯಾಗಿರುವುದನ್ನು ಅರಿತು ಮಹಿಳಾ ಪೊಲೀಸರ ಮೂಲಕ ಪರಿಶೀಲಿಸಲಾಗಿದೆ. ಆಗ ಗೋಮಾಂಸ ಕಂಡು ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಸ್ ಇಳಿಯುತ್ತಿದ್ದಂತೆ ಎರಡು ಚೀಲ ಮಾಂಸ ಸಹಿತ ಕೆಲ ಆರೋಪಿಗಳು ಪರಾರಿಯಾಗಿದ್ದು, ಮಹಿಳೆ ಹಾಗೂ ಮತ್ತೋರ್ವ ಸಿಕ್ಕಿಬಿದ್ದಿದ್ದಾರೆ. ಇದರ ಹಿಂದೆ ಜಾಲವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳ ಮುಖಂಡರು ಸೂಕ್ತ ತನಿಖೆ ಕೈಗೊಂಡು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಮಾಂಸವನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ.