ಬೆಳಗಾವಿ(ಘಟಪ್ರಭಾ): ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ-ಪ್ರೇಮದ ಚಲ್ಲಾಟಕ್ಕೆ ಬಿದ್ದು ಊರು ಬಿಟ್ಟು ಹೋಗಿರುವ ಇಬ್ಬರು ಅಪ್ರಾಪ್ತ ಬಾಲಕಿಯರು ಹಾಗೂ ಅಪ್ರಾಪ್ತ ಬಾಲಕರನ್ನು ಘಟಪ್ರಭಾ ಪೊಲೀಸರು ಸಂರಕ್ಷಿಸಿ ಬಾಲಕಿಯರನ್ನು ಗೋಕಾಕದಲ್ಲಿರುವ ಮಕ್ಕಳ ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಿದರೆ ಬಾಲಕರನ್ನು ಬೆಳಗಾವಿಯ ಮಕ್ಕಳ ನ್ಯಾಯಲಯಕ್ಕೆ ಹಾಜರುಪಡಿಸಿದ ನಂತರ ಬಾಲಮಂದಿರಕ್ಕೆ ಒಪ್ಪಿಸಲಾಗಿದೆ.
ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಇಬ್ಬರು ಅಪ್ರಾಪ್ತ ಸಹೋದರಿಯರು ಕಲ್ಲೋಳಿ ನಗರದ ಒಬ್ಬ ಅಪ್ರಾಪ್ತ ಯುವಕ ಹಾಗೂ ಗೋಕಾಕ ತಾಲೂಕಿನ ಕನಸಗೇರಿಯ ಯುವಕನ ಜತೆ ಪ್ರೀತಿ-ಪ್ರೇಮದ ಸುಳಿಗೆ ಬಿದ್ದು ಮನೆ ಬಿಟ್ಟು ಹೋಗಿದ್ದರು. ಈ ಬಗ್ಗೆ ಬಾಲಕಿಯರ ಪೋಷಕರು ಘಟಪ್ರಭಾದ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಘಟಪ್ರಭಾ ಪೊಲೀಸ್ ಠಾಣೆಯ ಪಿಐ ಎಚ್.ಡಿ ಮುಲ್ಲಾ ಹಾಗೂ ಸಿಬ್ಬಂದಿಯವರು ಒಂದು ಜೋಡಿಯನ್ನು ಗಡಿಭಾಗದ ಆಂಧ್ರಪ್ರದೇಶದಲ್ಲಿ ಪತ್ತೆ ಮಾಡಿ ಸಂರಕ್ಷಿಸಿದರೆ ಇನ್ನೊಂದು ಜೋಡಿಯನ್ನು ಅಥಣಿಯಲ್ಲಿ ಪತ್ತೆ ಮಾಡಿ ಸಂರಕ್ಷಿಸಿದ್ದಾರೆ. ಅಪ್ರಾಪ್ತ ಸಹೋದರಿಯರು ಪಾಲಕರ ಜತೆ ಹೋಗಲು ಒಪ್ಪದ ಕಾರಣಕ್ಕೆ ಪೊಲೀಸರು ಮಕ್ಕಳ ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ ಕಾನೂನು ಸಂಘರ್ಷಕ್ಕೆ ಒಳಪಟ್ಟ ಅಪ್ರಾಪ್ತ ಬಾಲಕರನ್ನು ಬೆಳಗಾವಿಯ ಮಕ್ಕಳ ನ್ಯಾಯಲಯಕ್ಕೆ ಹಾಜರುಪಡಿಸಿ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.