ನಾಡದೊರೆಯಿಂದ ನಾಡಿನ ಹೆಣ್ಣುಮಕ್ಕಳಿಗೆ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯ

ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಹೆಣ್ಣುಮಕ್ಕಳು ಪ್ರವೇಶ ಮಾಡದೆ ಇರುವ ಕ್ಷೇತ್ರಗಳಿಲ್ಲ

ಬೆಂಗಳೂರು: ನಾಡಿನ ಹೆಣ್ಣುಮಕ್ಕಳಿಗೆ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಹೆಣ್ಣುಮಕ್ಕಳು ಪ್ರವೇಶ ಮಾಡದೆ ಇರುವ ಕ್ಷೇತ್ರಗಳಿಲ್ಲ, ಸಾಧಿಸದ ಗುರಿಯಿಲ್ಲ, ಏರದ ಎತ್ತರವಿಲ್ಲ. ತಾಯಿ, ಅಕ್ಕ-ತಂಗಿ, ಹೆಂಡತಿಯಾಗಿ ಹೀಗೆ ಪುರುಷನ ಬದುಕಿನ ಪ್ರತಿ ಹಂತದಲ್ಲೂ ಕಷ್ಟ – ಸುಖಗಳಿಗೆ, ನೋವು – ನಲಿವುಗಳಿಗೆ ಹೆಗಲಾಗಿ ನಿಲ್ಲುವ ಹೆಣ್ಣುಮಕ್ಕಳು ನಿಸರ್ಗದ ಅದ್ಭುತ ಸೃಷ್ಟಿ. ಆಧುನಿಕ ಯುಗದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಲಿಂಗಾಧಾರಿತ ಅಸಮಾನತೆ, ಅವಕಾಶಗಳಲ್ಲಿ ತಾರತಮ್ಯದಂತಹ ಅಡೆ-ತಡೆ, ಅಡ್ಡಿ-ಆತಂಕಗಳ ವಿರುದ್ಧದ ಹೋರಾಟಕ್ಕೆ ನಾವು, ನೀವೆಲ್ಲರೂ ಬೆಂಬಲವಾಗಿ ನಿಂತು, ಹೆಣ್ಣುಮಕ್ಕಳ ಸಮಾನತೆ ಹಾಗೂ ಘನತೆಯ ಬದುಕಿನ ಕನಸನ್ನು ನನಸಾಗಿಸೋಣ. ನಮ್ಮ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ, ಶಕ್ತಿ ಮುಂತಾದ ಯೋಜನೆಗಳು ಸ್ತ್ರೀ ಸಬಲೀಕರದ ನಿಟ್ಟಿನಲ್ಲಿ ಹೊಸ ಇತಿಹಾಸ ನಿರ್ಮಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿವೆ. ಇದು ಹೆಣ್ಣುಮಕ್ಕಳ ಬಗೆಗಿನ ನಮ್ಮ ಕಾಳಜಿ. ನಾಡಿನ ಹೆಣ್ಣುಮಕ್ಕಳಿಗೆ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು ಎಂದಿದ್ದಾರೆ.