ಕೊರಳಲ್ಲಿನ ಚಿನ್ನದ ಸರ ಎಗರಿಸಿದ ಚಾಲಾಕಿ ಕಳ್ಳರು

ಇಳಕಲ್: ಮಹಿಳೆಯೊಬ್ಬಳು ಆಟೋ ಗ್ಯಾರೇಜಿನಲ್ಲಿ ನಿತ್ಯದ ವ್ಯವಹಾರ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಬೈಕ್ ಮೇಲೆ ಬಂದ ಕಳ್ಳರು ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿಕೊಂಡು ಹೋದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಬಸಮ್ಮ ಕರ್ಲಿ ಎಂಬ ಮಹಿಳೆ ಅಂಗಡಿಯಲ್ಲಿನ ಕೆಲಸ ಮುಗಿಸಿ ಮರಳಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ಮೇಲೆ ಬಂದ ಚಾಲಾಕಿ ಕಳ್ಳರು ಅವರ ಕೊರಳಿಗೆ ಕೈ ಹಾಕಿ 15 ಗ್ರಾಮ ತೂಕದ ಚಿನ್ನದ ಸರವನ್ನು ಲಪಟಾಯಿಸಿದ್ದಾರೆ.
ಒಂದು ಕ್ಷಣ ಏನಾಗುತ್ತಿದೆ ಎಂಬ ಅರಿವು ಕೂಡ ಬಾರದಂತೆ ಕಳ್ಳರ ಕರಾಮತ್ತು ನಡೆದಿದೆ. ಮಾರುತಿನಗರದ ತಮ್ಮ ಮನೆಗೆ ಹೋಗುವ ಮಾರ್ಗದಲ್ಲಿ ಡಾ. ಸಂತೋಷ ಪೂಜಾರಿ ಆಸ್ಪತ್ರೆಯ ಬಳಿ ಈ ಘಟನೆ ನಡೆದಿದೆ. ಈ ಕುರಿತಂತೆ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.