ಉಡುಪಿ: ಬುಧವಾರ ನಿಧನರಾದ ವಿಶ್ವ ಖ್ಯಾತಿಯ ಉದ್ಯಮಿ ರತನ್ ಟಾಟಾ ಸುಮಾರು ೧೦ ವರ್ಷದ ಹಿಂದೆ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ಉಡುಪಿಗೆ ಭೇಟಿ ನೀಡಿದ್ದರು. ಹಿರಿಯಡ್ಕ ಸಮೀಪದ ಪುತ್ತಿಗೆ ವಿದ್ಯಾಪೀಠದ ಸ್ವಾಗತ ಗೋಪುರ ಉದ್ಘಾಟಿಸಲು ಟಾಟಾ ಅವರನ್ನು ಆಹ್ವಾನಿಸಲಾಗಿತ್ತು.
ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿರುವ ರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ವ್ಯಕ್ತಿಯಲ್ಲಿ ಆದರ್ಶ ನೆಲೆಸಿದರೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬುದಕ್ಕೆ ಟಾಟಾ ಉದಾಹರಣೆ. ವ್ಯಕ್ತಿಗಿಂತ ದೇಶ ಮೊದಲು ಎಂಬ ತತ್ವದ ವ್ಯಕ್ತಿತ್ವ ರತನ್ ಟಾಟಾ ಅವರದು. ಆದರ್ಶಮಯ ಜೀವನ ನಡೆಸಿದ ಅವರು, ಪುತ್ತಿಗೆ ಮೂಲ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಭಗವದ್ಗೀತೆಯ ಬಗ್ಗೆ ಆದರ ವ್ಯಕ್ತಪಡಿಸಿರುವುದು ಇನ್ನೂ ನಮ್ಮ ಮನಸ್ಸಿನಲ್ಲಿ ಹಸಿರಾಗಿದೆ. ಶ್ರೀಕೃಷ್ಣ ಮುಖ್ಯಪ್ರಾಣರು ಅವರಿಗೆ ಸದ್ಗತಿ ನೀಡಲಿ ಎಂದು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.