Home ತಾಜಾ ಸುದ್ದಿ ಸಿಬಿಐ ಅಧಿಕಾರಿಗಳಿಂದ ಕಿರುಕುಳ: ರೆಡ್ಡಿ ಆರೋಪ

ಸಿಬಿಐ ಅಧಿಕಾರಿಗಳಿಂದ ಕಿರುಕುಳ: ರೆಡ್ಡಿ ಆರೋಪ

0
ಸಿಬಿಐ ಅಧಿಕಾರಿಗಳಿಂದ ಕಿರುಕುಳ: ರೆಡ್ಡಿ ಆರೋಪ

ಬಳ್ಳಾರಿ: ಸಿಬಿಐ ಅಧಿಕಾರಿಗಳು ನನಗೆ ಕಿರುಕುಳ ನೀಡುತ್ತಿದ್ದು, ಒಂದು ತಪ್ಪು ಕೇಸನ್ನು ಸಹ ನನ್ನ ವಿರುದ್ಧ ದಾಖಲಿಸಿದ್ದಾರೆ. ಅದರಲ್ಲಿ ಸೋಲುವ ಭಯದಿಂದ ಕೇಸ್ ನಡೆಸುವಲ್ಲೂ ಸಹ ಸಿಬಿಐ ಅಧಿಕಾರಿಗಳು ಹಿಂದೇಟು ಹಾಕಿ ವಿಳಂಬ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಜಿ.ಜನಾರ್ಧನರೆಡ್ಡಿ ಸಿಬಿಐ ಅಧಿಕಾರಿಗಳ ವಿರುದ್ಧ ನೇರವಾಗಿ ಆರೋಪ ಮಾಡಿದರು.
ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಸೋಮವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ದುರ್ಗಮ್ಮ ದೇವಿಯಲ್ಲಿ ಅನ್ನಸಂತರ್ಪಣೆ, ವಿಶೇಷ ಅಲಂಕಾರ ಮಾಡಿಸುವುದಾಗಿ ಬೇಡಿಕೊಂಡಿದ್ದೆ. ಅದಕ್ಕಾಗಿ ಸೋಮವಾರ ದೇವಸ್ಥಾನಕ್ಕೆ ಬಂದು ಇಡೀ ದೇಶಕ್ಕೆ ಒಳ್ಳೆಯದಾಗಲೆಂದು ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದ ಅವರು, ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಹನ್ನೆರಡು, ಹದಿಮೂರು ವರ್ಷಗಳಾದವು. ನಾನು ಪ್ರತಿದಿನ ಟ್ರಯಲ್ ನಡೆಸುವಂತೆ ಕೋರ್ಟ್‌ಗೆ ಕೋರಿದ್ದೇನೆ. ಮೂರ್ನಾಲ್ಕು ತಿಂಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಮನವಿ ಮಾಡಿದ್ದೇನೆ ಎಂದರು.