ಬಿಜೆಪಿಯವರ ಆತಂಕದ ಬಗ್ಗೆ ನಮಗೆ ಗೊತ್ತಿಲ್ಲ

0
13
ಲಾಡ್

ಹುಬ್ಬಳ್ಳಿ: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡಿದರೆ ಬಿಜೆಪಿ ಅವರಿಗೆ ಯಾಕೆ ಆತಂಕವಾಗುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕ್ಕಿ ಕರೆದಿಸುವ ವರೆಗೂ ಹಣ ನೀಡಲು ನಿರ್ಧಾರಿಸಿದ್ದಾರೆ. ಇದರಿಂದ ಜನರ ಅಕ್ಕಿ ಅಥವಾ ಏನಾದರೂ ಖರೀದಿಸಬಹುದು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೧೫ ಲಕ್ಷ ನೀಡುತ್ತೇನೆ, ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಹಣ ಯಾಕೆ ನೀಡಲಿಲ್ಲ?. ಸುಳ್ಳು ಹೇಳುವುದೆ ಬಿಜೆಪಿಯವರ ಕಾಯಕವಾಗಿದೆ. ಕಾಂಗ್ರೆಸ್ ಭರವಸೆ ನೀಡಿದಂತೆ ಈಡೇರಿಸುತ್ತದೆ. ಬರುವ ದಿನಗಳಲ್ಲಿ ಅಕ್ಕಿ ನೀಡುತ್ತೇವೆ. ದುಡ್ಡು ಕೊಟ್ಟರೆ ಬಿಜೆಪಿ ಅವರಿಗೆ ತೊಂದರೆಯಾಗುತ್ತಿಲ್ಲ. ನಮ್ಮ ನಾಯಕರ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ ಎಂದು ಹೇಳಿದರು.
ಬಿಜೆಪಿಯವರು ಮಾಡಿರುವ ಭ್ರಷ್ಟಾಚಾರದ ಬಗ್ಗೆ ಸರ್ಕಾರ ತನಿಖೆ ನಡೆಸುತ್ತದೆ. ಬಿಜೆಪಿ ಭ್ರಷ್ಟಾಚಾರ ಬಗ್ಗೆ ನಾನು ಮಾತನಾಡುವುದಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಕಳೆಪೆಯಾಗಿದೆ ಎಂಬ ದೂರುಗಳು ಬಂದಿವೆ. ಆ ಬಗ್ಗೆ ವಿವರ ಪಡೆಯುತ್ತೇನೆ. ಕೆಲ ಸ್ವಾಮೀಜಿಗಳು ಗೋ ಹತ್ಯೆ ನಿಷೇಧ ಕಾಯ್ದೆ ವಾಪಾಸ್ ಪಡೆಯಬಾರದು ಎಂದು ಆಗ್ರಹಿಸುತ್ತಿದ್ದಾರೆ. ಅವರ ಅಭಿಪ್ರಾಯಗಳನ್ನು ಅವರು ತಿಳಿಸಿದ್ದಾರೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ವಿದ್ಯುತ್ ದರ ಇಳಿಕೆ ಬಗ್ಗೆ ಮುಖ್ಯಮಂತ್ರಿ ಅವರಿಗೆ ಒತ್ತಡ ತಂದು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

Previous articleಅಪ್ರಾಪ್ತರಿಗೆ ವಾಹನ ನೀಡಿದರೆ ಆರ್‌ಸಿ ಮಾಲೀಕರ ವಿರುದ್ಧ ಕಠಿಣ ಕ್ರಮ
Next articleಅಕ್ರಮ ಮರಳು: 4 JCB, 23 ಟ್ರ್ಯಾಕ್ಟರ್ ಜಪ್ತಿ