ಕೊಪ್ಪಳ(ಕುಕನೂರು): ಅಧಿಕಾರ ಅನುಭವಿಸಲು ಕೆಲವು ಸಲ ಅದೃಷ್ಟ ಮತ್ತು ಸಮಯ ಅಗತ್ಯವಾಗಿ ಇರಬೇಕು. ಏಕೆಂದರೆ ಪಕ್ಷ ಕಟ್ಟಿದ ಹಲವರಿಗೆ ಅಧಿಕಾರ ಅನುಭವಿಸಲು ಆಗಿಲ್ಲ. ಆದರೆ ಬೇರೆ ಪಕ್ಷದಿಂದ ಬಂದವರಿಗೆ ಅಧಿಕಾರ ಲಭಿಸಿವೆ ಎಂದು ಶಾಸಕ ಬಸವರಾಜ್ ರಾಯರಡ್ಡಿ ಹೇಳಿದರು.
ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಬುಧವಾರ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದರು. ಈ ರೀತಿಯಾದರೆ ಹಿಂದಿನ ಹಳೆಯ ಜನರು ಏನು ಅಂದುಕೊಳ್ಳಬೇಕು. ಅಲ್ಲದೇ ಬಿಜೆಪಿಯಲ್ಲಿಯೂ ಕೂಡಾ ಎಲ್.ಕೆ. ಅಡ್ವಾಣಿಯವರು ಪಕ್ಷ ಕಟ್ಟಿದರು. ಆದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಅನುಭವಿಸಿದರು. ಇದರಿಂದಾಗಿ ಅಧಿಕಾರ ಎನ್ನುವುದು ಅದೃಷ್ಟದ ಮೇಲೂ ಅವಲಂಭಿತವಾಗಿದೆ ಎಂದರು.
ಮೊದಲು ನನ್ನ ಬೆಂಬಲಿಗರಾಗಿ, ಹಿಂದೆ ಬರುತ್ತಿದ್ದವರು ಸದ್ಯ ಜನಪ್ರತಿನಿಧಿ(ಹಾಲಪ್ಪ ಆಚಾರ್)ಗಳಾಗಿದ್ದಾರೆ. ಅಲ್ಲದೇ ದೇವಗೌಡರು ಮತ್ತು ಎಸ್.ಆರ್. ಬೊಮ್ಮಾಯಿಯವರ ಅವಧಿಯಲ್ಲಿಯೇ ನಾನು ಸಚಿವನಾಗಿದ್ದೆನು. ಆದರೆ ಇವರಿಬ್ಬರ ಮಕ್ಕಳ ಹಣೆಬರಹ ಚೆನ್ನಾಗಿತ್ತು. ಹಾಗಾಗಿ ಇಬ್ಬರ ಮಕ್ಕಳು (ಎಚ್.ಡಿ. ಕುಮಾರಸ್ವಾಮಿ ಮತ್ತು ಬಸವರಾಜ್ ಬೊಮ್ಮಾಯಿ)ಮುಖ್ಯಮಂತ್ರಿಗಳಾಗಿದ್ದರು. ಆಗ ಕುಮಾರಸ್ವಾಮಿ ನನ್ನ ಮುಂದೆ ನಿಂತುಕೊಳ್ಳಲು ಭಯ ಪಡುತ್ತಿದ್ದರು ಎಂದರು.