ಪಣಜಿ: ಕನ್ನಡ ಚಲನಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ರವರೊಂದಿಗೆ ಗೋವಾದಲ್ಲಿ ನಡೆಯುತ್ತಿರುವ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಗೋವಾಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ರನ್ನು ಪಣಜಿ ಅಲ್ತಿನೊದಲ್ಲಿರುವ ಅವರ ಮಹಾಲಕ್ಷ್ಮೀ ನಿವಾಸದಲ್ಲಿ ಭೇಟಿ ಮಾಡಿದರು.
ಮುಖ್ಯಮಂತ್ರಿ ಸಾವಂತ್, ಕಾಂತಾರ ಚಲನಚಿತ್ರಕ್ಕೆ ಲಭಿಸಿದ ಅಮೋಘ ಯಶಸ್ಸಿಗೆ ಉತ್ಕೃಷ್ಟ ಹಾಗೂ ಬಹುಗುಣಿ ನಟ ಎಂದು ಗೌರವಿಸಿ ರಿಷತ್ ಶೆಟ್ಟಿ ರವರನ್ನು ಅಭಿನಂದಿಸಿದರು. ಭವಿಷ್ಯದಲ್ಲಿ ನಮ್ಮ ಸಂಸ್ಕೃತಿ ಸನ್ಮಾನ ಮಾಡುವಂತಹ ಹಾಗೂ ಜಗತ್ತಿನಾದ್ಯಂತ ಇನ್ನಷ್ಟು ಕೀರ್ತಿ ಗಳಿಸುವಂತಹ ಅವಕಾಶಗಳು ಒದಗಿ ಬರಲಿ ಎಂದು ಹಾರೈಸಿದರು.
ಕಾಂತಾರ ಚಲನಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲದೆಯೇ ಇಡೀ ಜಗತ್ತಿನಾದ್ಯಂತ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಈ ಚಲನಚಿತ್ರ ಜಗತ್ತಿನಾದ್ಯಂತ ಪ್ರದರ್ಶನ ಕಂಡು ಹಿಟ್ ಆಗಿದೆ. ಕರಾವಳಿ ಭಾಗದ ದೈವಾರಾಧನೆಗೆ ಸಂಬಂಧಿಸಿದ ಚಿತ್ರಕಥೆಯಾಗಿದೆ. ಮೂಲತಃ ಕನ್ನಡ ಭಾಷೆಯ ಕಾಂತಾರ ಚಲನಚಿತ್ರವು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಜಗತ್ತಿನಾದ್ಯಂತ ಪ್ರದರ್ಶನ ಕಂಡಿದೆ.
