ದಾಂಡೇಲಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲಕ ಸಂಗ್ರಹಿಸಿರುವ ಸಂವೇದನಶೀಲ ದತ್ತಾಂಶದ ಕುರಿತು ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಸೃಜಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಲ್ಲಿ ಆ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟ ಎಚ್ಚರಿಕೆ ನೀಡಿದೆ.
ಆಯೋಗದ ಸದಸ್ಯ–ಕಾರ್ಯದರ್ಶಿ ಕೆ.ಎ. ದಯಾನಂದ ಅವರು ಮಂಗಳವಾರ ನೀಡಿದ ಹೇಳಿಕೆಯಲ್ಲಿ, “ಸಮೀಕ್ಷೆಯ ಅಂಕಿಅಂಶಗಳ ಬಗ್ಗೆ ಅನಧಿಕೃತವಾಗಿ ಸುಳ್ಳು ಮಾಹಿತಿ ರಚಿಸಿ WhatsApp, Facebook, Twitter, Instagram ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದರೆ, ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು,” ಎಂದು ತಿಳಿಸಿದ್ದಾರೆ.
2025ರ ಕರ್ನಾಟಕ ರಾಜ್ಯದ ಜಾತಿಗಣತಿ ವರದಿ ಎಂಬ ಶೀರ್ಷಿಕೆಯಡಿ ವಿವಿಧ ಜಾತಿಗಳ ಜನಸಂಖ್ಯೆಯ ತಪ್ಪು ಮಾಹಿತಿಯನ್ನು ವ್ಯಾಟ್ಸಪ್ ನಲ್ಲಿ ಹಂಚಿರುವ ಮೊಬೈಲ್ ಸಂಖ್ಯೆ: 8618891657 ಮತ್ತು 9972508500 ರ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ ತಿಳಿಸಿದ್ದಾರೆ.
ಹೈಕೋರ್ಟ್ ಆದೇಶದ ಪ್ರಕಾರ ಕಠಿಣ ಗೌಪ್ಯತೆ: ಮಾನ್ಯ ಉಚ್ಚ ನ್ಯಾಯಾಲಯದ 2025ನೇ ಸೆಪ್ಟೆಂಬರ್ 25 ಆದೇಶದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿ ಮತ್ತು ದತ್ತಾಂಶಗಳು ಸೋರಿಕೆಯಾಗದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸೂಚಿಸಿದೆ. ಅದರಂತೆ ಆಯೋಗದಿಂದ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಅಫಿಡೆವಿಟ್ ನ್ನು ‘ ಅ ‘ ಸಲ್ಲಿಸಲಾಗಿರುತ್ತದೆ. ಸಮೀಕ್ಷೆಯ ಮಾಹಿತಿ ಹಾಗೂ ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ಬದ್ಧತೆಯನ್ನು ಆಯೋಗ ಹೊಂದಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಎಚ್ಚರಿಸಿದ್ದಾರೆ.
ಎಚ್ಚರಿಕೆ: ಸುಳ್ಳು ಮಾಹಿತಿ ರಚನೆ ಮತ್ತು ಹಂಚಿಕೆ ಎರಡೂ ಅಪರಾಧ. ಆಯೋಗದವರು ಸಾರ್ವಜನಿಕರಿಗೆ ಮನವಿ ಮಾಡಿದ್ದು ಯಾವುದೇ ಅಧಿಕೃತವಲ್ಲದ, ದೃಢಪಡಿಸದ, ತಪ್ಪು ಅಥವಾ ಸುಳ್ಳು ಅಂಕಿಅಂಶಗಳನ್ನು ಸೃಜಿಸಬಾರದು, ಹಂಚಬಾರದು, ಫಾರ್ವರ್ಡ್ ಕೂಡ ಮಾಡಬಾರದು.
“ಸಮಾಜದಲ್ಲಿ ಗೊಂದಲ ಮೂಡಿಸುವ ಯಾವುದೇ ಸುಳ್ಳು ಮಾಹಿತಿ ಕಾನೂನುಬಾಹಿರ. ಇಂತಹ ಕೃತ್ಯಗಳು ನೇರವಾಗಿ ಕ್ರಿಮಿನಲ್ ಕ್ರಮಕ್ಕೆ ಕಾರಣವಾಗುತ್ತವೆ,” ಎಂದು ದಯಾನಂದ ಅವರು ಎಚ್ಚರಿಸಿದ್ದಾರೆ.
