ಮೈಸೂರು: ಮತಾಂತರ ತಡೆಯುವ ಹಕ್ಕು ಯಾರಿಗು ಇಲ್ಲ – ಮಹದೇವಪ್ಪ

0
59

ಮೈಸೂರು: ಮುಂದಿನ ಸಿಎಂ ಮಹದೇವಪ್ಪ ಎಂಬ ಘೋಷಣೆ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೇಳಿಬಂದಿತ್ತು. ಪುರಭವನದಲ್ಲಿ ಸಂವಿಧಾನ ಪೀಠಿಕೆ ಶಿಲಾಫಲಕ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಮುಂದಿನ ಸಿಎಂ ಮಹದೇವಪ್ಪ ಎಂದು ಕೂಗಿದರು, ಇದನ್ನು ಕೇಳಿದ ಸಚಿವರು ಮುಗ್ಳುನಕ್ಕರು.

ಅಭಿಮಾನದ ಕೂಗು ಸಹಜ: ಅಭಿಮಾನಿಗಳು ಸಹಜವಾಗಿಯೇ ಪ್ರೀತಿಯಿಂದ ಕೂಗುತ್ತಾರೆ. ಆದರೆ ಇರುವುದು ಒಂದೇ ಸಿಎಂ ಕುರ್ಚಿ. ಆ ಕುರ್ಜಿಯಲ್ಲಿ ಸಿದ್ದರಾಮಯ್ಯ ಬಿಗಿಯಾಗಿ ಕುಳಿತಿದ್ದಾರೆ ಎಂದು ಡಾ.ಎಚ್.ಸಿ. ಮಹದೇವಪ್ಪ ಸುದ್ದಿಗಾರರ ಪ್ರಶ್ನೆಗೆ ಪ್ತತಿಕ್ರಿಯಿಸಿದರು. ಸಿಎಂ ಕುರ್ಚಿ 2028 ರವರೆಗು ಭದ್ರವಾಗಿಯೇ ಇರುತ್ತದೆ. ಇದರಲ್ಲಿ ಯಾವುದೇ ಸಂದೇಹ ಬೇಡ. ಇದೆಲ್ಲಾ ಅಭಿಮಾನಿಗಳ ಘೋಷಣೆ ಮಾತ್ರ.̤ ಅವರವರ ಅಭಿಮಾನಿಗಳು ಈ ರೀತಿ ಕೂಗುವುದು ಸಹಜ ಎಂದರು.

ನ್ಯಾಯಾಲಯಕ್ಕೆ ಗೌರವ ಕೊಡಿ: ಬಾನು ಮುಷ್ತಾಕ್ ಹೆಸರು ವಿರೋಧ ಮಾಡಿದವರಿಗೆ ನ್ಯಾಯಾಲಯ ಸಂವಿಧಾನದ ಮೂಲಕವೇ ಬಾಯಿಗೆ ಬೀಗ ಹಾಕಿದೆ. ಇನ್ನಾದರು ವಿರೋಧವನ್ನು ನಿಲ್ಲಿಸಬೇಕು. ನ್ಯಾಯಾಲಯ ಹೇಳಿದ ಮೇಲೂ ಆ ಹೆಸರಿಗೆ ವಿರೋಧ ಮಾಡುವುದು ಸರಿಯಲ್ಲ. ಎಲ್ಲರನ್ನು ಮುಕ್ತ ಮನಸ್ಸಿನಿಂದ ದಸರಾಗೆ ಆಹ್ವಾನ ನೀಡುತ್ತಿದ್ದೇನೆ. ಇದು ಎಲ್ಲಾ ಧರ್ಮ ಜನರ ನಾಡಹಬ್ಬ. ಸಂತೋಷದಿಂದ ಆಚರಿಸೋಣ ಬನ್ನಿ ಎಂದರು.

ಜನಗಣತಿ ಮೂಲಕ ಹಿಂದು ಧರ್ಮ ಒಡೆಯುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು: ಸಿದ್ದರಾಮಯ್ಯ ಯಾಕೆ ಹಿಂದು ಧರ್ಮ ಒಡೆಯುತ್ತಾರೆ. ಜನಗಣತಿಯಲ್ಲಿ ಹಿಂದು ಧರ್ಮ ಪ್ರಶ್ನೆಯೇ ಉದ್ಬವವಾಗಿಲ್ಲ. ಏಕೆಂದರೆ ಜಾತಿ ಗಣತಿ ಮಾಡುತ್ತಿರುವುದು ಜಾತಿಗಳ ಸ್ಥಿತಿಗಳ ಅಧ್ಯಯನಕ್ಕಾಗಿಯೇ ಹೊರತು ಧರ್ಮ ಒಡೆಯುವುದು ನಮ್ಮ ಕೆಲಸ ಅಲ್ಲ. ಅದು ಬಿಜೆಪಿಯ ಕೆಲಸ. ಇದಕ್ಕಾಗಿ ಬಿಜೆಪಿ ಸುಳ್ಳು ಹಬ್ಬಿಸುತ್ತಿದೆ ಎಂದು ಆರೋಪಿಸಿದರು. ಯಾರಾದರು ಮತಾಂತರ ಆಗುತ್ತೇವೆ ಎಂದರೇ ಅದನ್ನು ತಡೆಯುವ ಹಕ್ಕು ಯಾರಿಗು ಇಲ್ಲ. ಅದು ಅವರವರ ಸ್ವಾತಂತ್ರ‍್ಯ. ಇದಕ್ಕೆ ಅಡ್ಡಿ ಮಾಡಲು ನಾವ್ಯಾರು. ಅಂಬೇಡ್ಕರ್ ಅವರೇ ನಾನು ಹಿಂದುವಾಗಿ ಹುಟ್ಟಿದ್ದೇನೆ. ಹಿಂದುವಾಗಿ ಸಾಯಲ್ಲ ಎಂದಿದ್ದರು. ಕೆಲವರು ಅದನ್ನ ಪರಿಪಾಲನೆ ಮಾಡುತ್ತಿರಬಹುದು ಎಂದರು.

ಹೊಸ ಜಾತಿಗಳನ್ನ ಸೃಷ್ಟಿ ಮಾಡುತ್ತಿಲ್ಲ: ಹೊಸ ಜಾತಿಗಳನ್ನ ಸೃಷ್ಟಿ ಮಾಡಲು ಸಾಧ್ಯ ಇದ್ಯಾ ಹೇಳಿ. ಮತಾಂತರ ಆಗಿದ್ದವರ ಮೂಲ ಜಾತಿಯನ್ನ ನಮೂದಿಸಿದ್ದೇವೆ ಅಷ್ಟೇ. ಅದರಲ್ಲಿ ಏನು ತಪ್ಪಿದೆ ಹೇಳಿ. ಬಿಜೆಪಿ ನಮ್ಮ ಎಲ್ಲಾ ಒಳ್ಳೆಯ ಕೆಲಸಗಳಿಗೆ ವಿವಾದ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಅದು ಅವರ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದರು.

ಸಚಿವರ ವಿರೋಧ ಇಲ್ಲ: ಜಾತಿ ಗಣತಿಗೆ ಸಚಿವ ಸಂಪುಟದ ಯಾವ ಸಚಿವರೂ ವಿರೋಧ ಮಾಡಿಲ್ಲ. ಸಚಿವ ಸಂಪುಟದಲ್ಲಿ ಯಾವ ಗೊಂದಲವು ಆಗಿಲ್ಲ ಎಂದು ಸಚಿವ ಮಹದೇವಪ್ಪ ಸ್ಪಷ್ಟಪಡಿಸಿದರು. ಹೊರಗಡೆ ಜಾತಿ ಸಭೆಗಳು ಮಾಡುತ್ತಿರುವುದು ಜಾತಿ ಗಣತಿಯ ವಿರೋಧಕ್ಕೆ ಅಲ್ಲ. ತಮ್ಮ ಜಾತಿಯನ್ನ ಯಾವ ನಿರ್ಧಿಷ್ಟ ಹೆಸರಿನಲ್ಲಿ ಬರೆಸಬೇಕೆಂದು ಜಾಗೃತಿ ಮೂಡಿಸಲು ಸಭೆಗಳು ನಡೆಯತ್ತಿದ್ದು ಇದು ತಪ್ಪಲ್ಲ ಎಂದರು.

Previous articleದಾವಣಗೆರೆ: ವಿಚ್ಛೇದನ ಬೇಕೆಂದ ಪತ್ನಿಗೆ ಪತಿಯಿಂದ ಚಾಕು ಇರಿತ!
Next articleದಾವಣಗೆರೆ: DJ ಇಲ್ಲದೆ ಇದ್ರು ಮಹಾಗಣಪನಿಗೆ ಅದ್ಧೂರಿ ವಿದಾಯ

LEAVE A REPLY

Please enter your comment!
Please enter your name here