Home ನಮ್ಮ ಜಿಲ್ಲೆ ಮೈಸೂರು ಮೈಸೂರು ದಸರಾ 2025: ಉದ್ಘಾಟನೆ ವಿವಾದ, ಹೈಕೋರ್ಟ್ ಮೊರೆ ಹೋದ ಪ್ರತಾಪ್ ಸಿಂಹ

ಮೈಸೂರು ದಸರಾ 2025: ಉದ್ಘಾಟನೆ ವಿವಾದ, ಹೈಕೋರ್ಟ್ ಮೊರೆ ಹೋದ ಪ್ರತಾಪ್ ಸಿಂಹ

0

ಮೈಸೂರು ದಸರಾ-2025 ಸುದ್ದಿಯಲ್ಲಿದೆ. ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಆಹ್ವಾನಿಸಿರುವ ಸರ್ಕಾರದ ನಿರ್ಧಾರದ ಕುರಿತು ಚರ್ಚೆ ನಡೆಯುತ್ತಿದೆ. ಈ ನಿರ್ಧಾರ ಪ್ರಶ್ನಿಸಿ ಬಿಜೆಪಿ ನಾಯಕ, ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರತಾಪ್ ಸಿಂಹ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಸರ್ಕಾರ ಹೊರಡಿಸಿದ ಆಹ್ವಾನ ಪತ್ರ ಹಿಂಪಡೆಯುವಂತೆ ಹಾಗೂ ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಬಾರದು ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.

ಅರ್ಜಿಯಲ್ಲೇನಿದೆ?: ಅರ್ಜಿಯಲ್ಲಿ ಪ್ರತಾಪ್ ಸಿಂಹ ಮೈಸೂರು ಸಂಸ್ಥಾನವನ್ನು ಹಿಂದಿನ ಕಾಲದಲ್ಲಿ ಮಹಿಷಾಸುರ ಎಂಬ ರಾಕ್ಷಸ ಆಳುತ್ತಿದ್ದ. ಶಿವನ ಪತ್ನಿಯಾದ ಪಾರ್ವತಿ ದೇವಿ ಚಾಮುಂಡೇಶ್ವರಿ ರೂಪದಲ್ಲಿ ಅವತರಿಸಿ, ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನನ್ನು ಸಂಹಾರ ಮಾಡಿದರು ಎಂಬ ಪ್ರತೀತಿಯಿದೆ. ಆ ಘಟನೆಯ ನೆನಪಿಗಾಗಿ ಈ ನಗರಕ್ಕೆ ಮೊದಲಿಗೆ ಮಹಿಷೂರು ಎಂಬ ಹೆಸರು ಬಂದಿತು

ನಂತರ ಬ್ರಿಟಿಷರ ಆಡಳಿತದ ಸಮಯದಲ್ಲಿ ಮಹಿಷೂರನ್ನು ಮೈಸೂರು ಎಂದು ಮರು ನಾಮಕರಣ ಮಾಡಲಾಯಿತು. ಈ ಧಾರ್ಮಿಕ-ಸಾಂಸ್ಕೃತಿಕ ಹಿನ್ನೆಲೆಯುಳ್ಳ ದಸರಾ ಮಹೋತ್ಸವದಲ್ಲಿ, ಮಹಿಷಾಸುರನನ್ನು ನಂಬಿಕೆ-ಪ್ರತಿಮೆ ಮಾಡುವ ರೀತಿಯಲ್ಲಿ ಬರಹ ಬರೆದಿದ್ದ ಬಾನು ಮುಷ್ತಾಕ್ ಅವರಿಗೆ ವೇದಿಕೆ ನೀಡುವುದು ಅಸಂಗತ ಎಂದು ವಾದಿಸಿದ್ದಾರೆ.

ಬಾನು ಮುಷ್ತಾಕ್ ತಮ್ಮ ಸಾಹಿತ್ಯ ಸಾಧನೆಗಳಿಗಾಗಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದು ಜಾಗತಿಕ ಮಟ್ಟದಲ್ಲಿ ಹೆಸರಾಗಿದ್ದಾರೆ. ಅವರಂತಹ ಪ್ರತಿಭಾವಂತ ಲೇಖಕಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಸರ್ಕಾರದ ನಿರ್ಧಾರ. ಆದರೆ, ಬಿಜೆಪಿ ನಾಯಕರು, ಪ್ರತಾಪ್ ಸಿಂಹ ಸೇರಿದಂತೆ ಹಲವರು ಇದನ್ನು ವಿರೋಧಿಸುತ್ತಿದ್ದು, ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆ ತರುವ ಕ್ರಮವೆಂದು ಆರೋಪಿಸುತ್ತಿದ್ದಾರೆ.

ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಶೀಘ್ರವೇ ನಿಗದಿಯಾಗಲಿದೆ. ಮೈಸೂರು ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರದ ಪರವಾಗಿ ಬಾನು ಮುಷ್ತಾಕ್‌ಗೆ ನೀಡಿದ ಆಹ್ವಾನ ಮುಂದುವರಿಯುತ್ತದೆಯೇ ಅಥವಾ ಹಿಂತೆಗೆದುಕೊಳ್ಳಲಾಗುತ್ತದೆಯೇ? ಎಂಬುದು ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ.

2025ರ ಮೈಸೂರು ದಸರಾ ತಯಾರಿ ನಡೆಯುತ್ತಿದೆ. ಈ ಬಾರಿ ದಸರಾ 10 ದಿನಗಳ ಬದಲು 11 ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರ ತನಕ ಈ ಬಾರಿಯ ದಸರಾ ನಡೆಯಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version