ಹುಬ್ಬಳ್ಳಿ: ಕಿತ್ತೂರ ಕರ್ನಾಟಕ ಭಾಗವೂ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಕಲ್ಯಾಣ ಕರ್ನಾಟಕ ಶಾಸಕರಿಗೆ 500 ಕೋಟಿ ಅನುದಾನ ನೀಡುವಂತೆ ಈ ಭಾಗದ ಶಾಸಕರಿಗೆ ನೀಡಬೇಕು. ಇಲ್ಲವಾದರೆ ಉತ್ತರ ಕರ್ನಾಟಕ ಭಾಗವನ್ನು ಪ್ರತ್ಯೇಕ ರಾಜ್ಯ ಮಾಡುವುದರಲ್ಲಿ ತಪ್ಪೇನಿಲ್ಲ. ಅದಕ್ಕೆ ನನ್ನ ಸಹಮತವಿದೆ ಎಂದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ನಾವು 100 ರೂ. ಕೇಳಿದರೆ ಅದು ನಮಗೆ 70 ರೂ. ನೀಡುತ್ತಿದೆ. ಒಂದೇ ಸಾರಿ ಅನುದಾನ ನೀಡಿದರೆ ಅಭಿವೃದ್ಧಿ ಕಾರ್ಯಗಳ ಸರಿಯಾಗಿ ಮಾಡಲು ಅನುಕೂಲವಾಗಲಿದೆ. ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡದಿದ್ದರೆ ಈ ಭಾಗದ ಶಾಸಕರು ಅನುದಾನ ಕೇಳಲು ಬೆಂಗಳೂರಿಗೆ ಹೋಗುವ ಅನಿವಾರ್ಯ ಸೃಷ್ಟಿಯಾಗಲ್ಲ ಎಂದರು.
ಗ್ಯಾರಂಟಿ-ಅಕ್ರಮ ಹೆಚ್ಚುತ್ತಿದೆ: ಬಡತನ ರೇಖೆಗಿಂತ ಕೆಳಗಿರುವವರಿಗೆ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಆದರೆ, ಅಕ್ರಮ ಹೆಚ್ಚುತ್ತಿದೆ. ಸ್ಥಿತಿವಂತರು ಸ್ವಯಂಪ್ರೇರಿತವಾಗಿ ಸೌಲಭ್ಯ ಬಿಟ್ಟುಕೊಡುವ ಮನಸ್ಸು ಮಾಡಬೇಕು. ಸರ್ಕಾರದಲ್ಲಿ ಯಾವುದೂ ಪಾರದರ್ಶಕವಾಗಿ ಆಗುತ್ತಿಲ್ಲ. ಅದನ್ನು ತಡೆಗಟ್ಟಬೇಕು. ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರವಲ್ಲದೆ, ಆದಾಯ ತೆರಿಗೆ ಪಾವತಿಸುವವರಿಗೂ ರೇಷನ್ ನೀಡಲಾಗುತ್ತಿದೆ. ನನ್ನ ಸೊಸೆ, ಸಹೋದರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿದೆ. ಅಂಗವಿಕಲ, ವೃದ್ಧಾಪ್ಯ ವೇತನ ಪಡೆಯುತ್ತಿರುವವರಲ್ಲಿ ಶೇ. 30ರಷ್ಟು ಜನ ಮಾತ್ರ ನಿಜವಾದ ಫಲಾನುಭವಿಗಳಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರು ಪ್ರಸ್ತಾಪಿಸಿದ್ದ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತಕಳ್ಳತನಕ್ಕೆ ಸಂಬಂಧಿಸಿದಂತೆ ಆಡಳಿತ ವ್ಯವಸ್ಥೆ ಬಿಗುವಾಗಿದ್ದರೆ ಹಾಗೇ ಆಗುತ್ತಿರಲಿಲ್ಲ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಸಚಿವರು ಶಾಸಕರ ಕೈಗೆ ಸಿಗಬೇಕು ಎಂದು ಹೇಳಿದ್ದೇನೆ. ಹೀಗೆ ಸಲಹೆ ನೀಡಿದರೆ ಸರ್ಕಾರದ ವಿರುದ್ಧ ಎಂದು ಹೇಗಾಗುತ್ತದೆ? ಕುಟುಂಬದಲ್ಲಿ ಯಾರಾದರೂ ದುಶ್ಚಟಕ್ಕೆ ಒಳಗಾದರೆ ಸುಧಾರಿಸು ಎಂದು ಸಲಹೆ ನೀಡುತ್ತೇವೆ. ನಾನು ಸಹ ಅದನ್ನೇ ಹೇಳಿದ್ದು ಎಂದರು.