ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಮಪುರವನ್ನು ಹೊಸ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲು ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಒತ್ತಾಯಿಸಿದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೇಡಿಕೆಯಾದ ಪರಶುರಾಮಪುರವನ್ನು ಹೊಸ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಸೋಮವಾರ ವಿಧಾನಸಭೆ ಕಲಾಪದಲ್ಲಿ ಶಾಸಕರು ಸರ್ಕಾರವನ್ನು ಆಗ್ರಹಿಸಿದರು. ಕಳೆದ 13 ವರ್ಷಗಳಿಂದ ಈ ಬೇಡಿಕೆಯನ್ನು ತಾನು ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
“ಪರಶುರಾಮಪುರವನ್ನು ಹೊಸ ತಾಲ್ಲೂಕು ಕೇಂದ್ರವನ್ನಾಗಿ ಮಾಡುವ ಕುರಿತು ಸಮಿತಿಯು ಸಹ ಶಿಫಾರಸು ಮಾಡಿತ್ತು ಮತ್ತು ಹಿಂದಿನ ಕಂದಾಯ ಸಚಿವರು ಕೂಡಾ ಇದನ್ನು ಒಪ್ಪಿಕೊಂಡಿದ್ದರು. ಆದರೆ, 2018-19ರಲ್ಲಿ ಹೊಸದಾಗಿ 63 ತಾಲ್ಲೂಕುಗಳನ್ನು ರಚಿಸಿದಾಗ, ಪರಶುರಾಮಪುರವನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಪರಶುರಾಮಪುರಕ್ಕಿಂತ ಕಡಿಮೆ ಅರ್ಹತೆ ಇರುವ ಕೆಲವು ಗ್ರಾಮಗಳನ್ನು (ಹೋಬಳಿಗಳಿಲ್ಲದಿದ್ದರೂ) ಹೊಸ ತಾಲ್ಲೂಕುಗಳನ್ನಾಗಿ ಮಾಡಲಾಗಿದೆ” ಎಂದು ಶಾಸಕರು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, “ಪರಶುರಾಮಪುರದ ಬೇಡಿಕೆ ವೈಜ್ಞಾನಿಕವಾಗಿ ಸಮರ್ಥನೀಯವಾಗಿದೆ ಎಂದು ಒಪ್ಪಿಕೊಂಡರು. ಪ್ರಸ್ತುತ ಸರ್ಕಾರವು ಇತ್ತೀಚೆಗೆ ರಚಿಸಲಾದ 63 ಹೊಸ ತಾಲ್ಲೂಕುಗಳಲ್ಲಿ ಮೂಲಸೌಕರ್ಯ ಒದಗಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ತಾಲ್ಲೂಕುಗಳ ರಚನೆಗೆ ನಿರ್ಧರಿಸಿದಾಗ ಪರಶುರಾಮಪುರದ ಬೇಡಿಕೆಗೆ ಉನ್ನತ ಆದ್ಯತೆ ನೀಡಲಾಗುವುದು” ಎಂದು ಭರವಸೆ ನೀಡಿದರು.
ಶಾಸಕರೊಂದಿಗಿನ ವಿಶ್ವಾಸವನ್ನು ಮಂತ್ರಿಗಳು ಗಣನೆಗೆ ತೆಗೆದುಕೊಂಡಿದ್ದು, ಸರಿಯಾದ ಸಮಯದಲ್ಲಿ ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ತಿಳಿಸಿದರು. ಆಗ ಶಾಸಕ ರಘುಮೂರ್ತಿ, ಈ ವಿಳಂಬದಿಂದಾಗಿ ಜನರಿಗೆ ಚುನಾಯಿತ ಪ್ರತಿನಿಧಿಗಳ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ, ಆದ್ದರಿಂದ ಆದಷ್ಟು ಬೇಗ ಈ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, ಶಾಸಕರು ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳಿಗೆ ಒಂದೇ ಒಂದು ಉಪ-ವಿಭಾಗ ಕಚೇರಿ ಇರುವುದರಿಂದ ಚಳ್ಳಕೆರೆಯಲ್ಲಿ ಉಪ-ವಿಭಾಗ ಕಚೇರಿ ಸ್ಥಾಪಿಸಬೇಕೆಂಬ ಬೇಡಿಕೆಯನ್ನೂ ಮಂಡಿಸಿದರು. ಮಂತ್ರಿಗಳು ಹೊಸ ತಾಲ್ಲೂಕು ರಚನೆಯ ವಿಷಯವನ್ನು ಇತ್ಯರ್ಥಪಡಿಸಿದ ನಂತರ, ಉಪ-ವಿಭಾಗ ಕಚೇರಿಯ ವಿಷಯವನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು.