ಚಿತ್ರದುರ್ಗ: ದೆಹಲಿಯಲ್ಲಿ ನಡೆದ ಭಯೋತ್ಪಾದನಾ ಕೃತ್ಯದಿಂದ ಇಡೀ ದೇಶ ಆತಂಕಗೊಂಡಿದೆ. ಇಡೀ ದೇಶದಲ್ಲಿ ಅಲ್ಲೋಲಕಲ್ಲೋಲ ಮಾಡುವ ವಿಚಾರ ಇಟ್ಟುಕೊಂಡು ಹೋಗುವಾಗ ಬ್ಲಾಸ್ಟ್ ಆಗಿದೆ. ಈಗ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಸಂಕುಚಿತ ಭಾವನೆ ಮಾಡುವುದು ರಾಜಕೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಅವರಿಗೆ ಭಯೋತ್ಪಾದಕರು ಯಾವಾಗ ದಾಳಿ ಮಾಡುತ್ತಾರೆ ಎನ್ನುವುದು ಗೊತ್ತಿತ್ತಾ ಎಲ್ಲದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಬಿಹಾರ ಚುನಾವಣೆಯ ಎಕ್ಸಿಟ್ ಪೋಲ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಹಾರ ಚುನಾವಣೆಯಲ್ಲಿ ಎನ್ಡಿಎಗೆ ಬಹುಮತ ಬರುತ್ತದೆ ಎನ್ನುವ ಟ್ರೆಂಡ್ ಇತ್ತು. ಪ್ರಧಾನಿ ನರೇಂದ್ರ ಮೋದಿಯವರ ಇಮೇಜು ಹಾಗೂ ನಿತೀಶ್ ಕುಮಾರ್ ಅವರ ಆಡಳಿತವನ್ನು ಜನರು ಬೆಂಬಲಿಸಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಕೊಟ್ಟ ಯೋಜನೆಗಳು, ಶಿಕ್ಷಣ ಸಂಸ್ಥೆಗಳು, ಜನರು ಅಭಿವೃದ್ಧಿ ಮತ್ತು ಶಾಂತಿಯನ್ನು ಬಯಸುತ್ತಾರೆ. ಹಿಂದಿನ ಆರ್ಜೆಡಿಯ ಜಂಗಲ್ ರಾಜ್ ಜನರ ಮನಸ್ಸಿನಿಂದ ಹೋಗಿಲ್ಲ. ಹೀಗಾಗಿ ಜನರು ಮತ್ತೊಮ್ಮೆ ಜಂಗಲ್ ರಾಜ್ ಬೇಡ ಎನ್ನುವ ಕಾರಣಕ್ಕೆ ಎನ್ಡಿಎಗೆ ಬೆಂಬಲ ಸೂಚಿಸಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರ ಭ್ರಮೆ: ನವೆಂಬರ್ನಲ್ಲಿ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂಬ ಮಾತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ನಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದರೆ, ಪ್ರತಿದಿನ ಒಬ್ಬೊಬ್ಬರು ಒಂದು ಹೇಳಿಕೆ ನೀಡುತ್ತಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ ಹೈಕಮಾಂಡ್ ಏನು ಹೇಳುತ್ತದೆ ಅದನ್ನು ಪಾಲಿಸುತ್ತೇವೆ ಎಂದರು. 2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಅದು ಕಾಂಗ್ರೆಸ್ ನಾಯಕರ ಭ್ರಮೆ ಎಂದು ಹೇಳಿದರು.
ಸ್ವದೇಶಿ ಭಾವನೆ ಮೂಡಿಸಲು ಮೇಳ: ಸ್ವದೇಶಿ ಮೇಳದ ಕುರಿತು ಮಾತನಾಡಿದ ಅವರು, ಪ್ರತಿಯೊಂದು ಲೋಕಸಭಾ ಕೇತದಲ್ಲಿ ಸ್ವದೇಶಿ ಮೇಳ ನಡೆಸಲು ತೀರ್ಮಾನಿಸಲಾಗಿದೆ. ಸ್ವದೇಶದಲ್ಲಿ ತಯಾರಾಗಿರುವ ವಸ್ತುಗಳನ್ನು ಬಳಕೆ ಮಾಡಬೇಕು ಎಂದು ನಮ್ಮ ಪ್ರಧಾನಿಗಳು ಕರೆ ಕೊಟ್ಟಿದ್ದಾರೆ. ಮಹಾತ್ಮಾ ಗಾಂಧಿಯವರ ಸ್ವದೇಶಿ ವಿಚಾರವನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ. ಸ್ವದೇಶಿ ವಸ್ತುಗಳಿಗೆ ದೊಡ್ಡ ಪ್ರಮಾಣದ ಮಾರುಕಟ್ಟೆ ನಿರ್ಮಾಣ ಮಾಡಬೇಕೆಂದು ಸ್ವದೇಶಿ ಮೇಳ ಮಾಡುತ್ತಿದ್ದೇವೆ. ಅದರಲ್ಲಿ ದಿನ ಬಳಕೆ ವಸ್ತುಗಳು, ಬಟ್ಟೆಗಳ ತಯಾರಿಕೆ, ಅಡುಗೆ ಸಾಮಾನು, ಕೇಂದ್ರ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸಲಾಗುತ್ತದೆ. ಬ್ಯಾಂಕ್ ಗಳ ಮೂಲಕ ಬಡವರಿಗೆ ಯಾವ ಯೋಜನೆಗಳಿವೆ ಎಂದು ತಿಳಿಸಲಾಗುತ್ತದೆ. ಜನರಲ್ಲಿ ಸ್ವದೇಶಿ ಭಾವನೆ ಮೂಡಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
