Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು: ಸಹಕಾರಿ ವಲಯ ಡಿಜಿಟಲೀಕರಣಕ್ಕೆ ಆದ್ಯತೆ – ಜೋಶಿ

ಬೆಂಗಳೂರು: ಸಹಕಾರಿ ವಲಯ ಡಿಜಿಟಲೀಕರಣಕ್ಕೆ ಆದ್ಯತೆ – ಜೋಶಿ

0

ಬೆಂಗಳೂರು: ಸಹಕಾರಿ ವಲಯದ ಅಭ್ಯುದಯಕ್ಕಾಗಿ ಮಹತ್ವದ ಹೆಜ್ಜೆಯಿರಿಸಿದ ಕೇಂದ್ರ ಸರ್ಕಾರ ಪ್ರತ್ಯೇಕ ಸಹಕಾರ ಸಚಿವಾಲಯ ತೆರೆಯಿತಲ್ಲದೆ, ಇದೀಗ ಪಾರದರ್ಶಕತೆಗಾಗಿ ಸಂಪೂರ್ಣ ಡಿಜಿಟಲೀಕರಣಕ್ಕೆ ತರಲು ಒತ್ತು ನೀಡುತ್ತಿದೆ ಎಂದು ಕೇಂದ್ರ ಗಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ, ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ ಆಯೋಜಿಸಿದ್ದ ʼಸೌಹಾರ್ದ ಸಹಕಾರಿ ಕಾಯ್ದೆ ಹಾಗೂ ಸೌಹಾರ್ದ ಸಹಕಾರಿ ಚಳವಳಿಯ ರಜತ ಮಹೋತ್ಸವʼ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಹಕಾರಿ ವಲಯದ ಸಬಲತೆಗೆ ಕೇಂದ್ರ ಸಹಕಾರ ಸಚಿವಾಲಯ ₹2,516 ಕೋಟಿ ಯೋಜನೆ ರೂಪಿಸಿದೆ. ದೇಶದ PACS (PRIMARY AGRICULTURE CREDIT SOCIETIES) ಕಂಪ್ಯೂಟರ್ ಆಧಾರಿತ ಪಾರದರ್ಶಕ ವ್ಯವಸ್ಥೆ ತರಲು ಮುಂದಾಗಿದೆ ಎಂದು ಹೇಳಿದರು.

ಡಿಜಿಟಲ್ ವಹಿವಾಟು, ಹಣ ವರ್ಗಾವಣೆಯಲ್ಲಿ ಭಾರತ ಇದೀಗ ನಂಬರ್‌ ಒನ್‌ ರಾಷ್ಟ್ರವಾಗಿದೆ. ಬ್ಯಾಂಕಿಂಗ್‌ ವಲಯವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿದ ಕೇಂದ್ರ ಸರ್ಕಾರ ಇದೀಗ ಸಹಕಾರ ಕ್ಷೇತ್ರವನ್ನೂ ಡಿಜಿಟಲೀಕರಣಕ್ಕೆ ತರಲು ಯೋಜಿಸಿ ಕ್ರಮ ಕೈಗೊಳ್ಳುತ್ತಿದೆ ಎಂದರು.

DBTಯಿಂದ ₹4 ಲಕ್ಷ ಕೋಟಿ ಉಳಿತಾಯ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತಂದರು. ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ DBT (ನೇರ ಹಣ ವರ್ಗಾವಣೆ) ಮೂಲಕ ತಲುಪಿಸಿದ್ದರಿಂದ ಸರ್ಕಾರಕ್ಕೆ ₹4 ಲಕ್ಷ ಕೋಟಿ ಉಳಿತಾಯವಾಗಿದೆ ಎಂದು ತಿಳಿಸಿದರು.

2015ರಿಂದ 18ರವರೆಗೆ DBT ಮೂಲಕ 55 ಕೋಟಿ ಬ್ಯಾಂಕ್ ಖಾತೆಗಳಿಗೆ ನೇರ ಹಣ ಮಾಡಿದ್ದರಿಂದಾಗಿ ಸರ್ಕಾರದ ಸೌಲಭ್ಯಗಳಲ್ಲಿ ಮಧ್ಯವರ್ತಿಗಳ ಹಾವಳಿ ಇನ್ನಿಲ್ಲದಂತಾಯಿತು. ಅಲ್ಲದೇ, ಪಾರದರ್ಶಕತೆ ಮೂಡಿತು. ಹೀಗಾಗಿ ಈಗ ದೇಶದ ಸಹಕಾರಿ ವಲಯದಲ್ಲೂ ನಮ್ಮ ಸರ್ಕಾರ ಡಿಜಿಟಲೀಕರಣ ತರಲು ಮುಂದಾಗಿದೆ ಎಂದು ಹೇಳಿದರು.

5 ಲಕ್ಷ ಹಳ್ಳಿಗಳಲ್ಲಿ ವೈಫೈ: NDA ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ ಕೇವಲ 360 ಗ್ರಾಪಂಗಳಲ್ಲಿ ಮಾತ್ರ OFC ಕೇಬಲ್ ಹಾಗೂ ವೈಫೈ ವ್ಯವಸ್ಥೆಯಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲೀಕರಣಕ್ಕೆ ಮಹತ್ವ ನೀಡಿದ್ದರಿಂದಾಗಿ ಇದೀಗ ದೇಶಾದ್ಯಂತ 5 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ವೈಫೈ ವ್ಯವಸ್ಥೆ ಹೊಂದಿದೆ ಹಾಗೂ ಡಿಜಿಟಲೀಕರಣ ಸಾಕಾರಗೊಂಡಿದೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಇಂದು ಜನರ ನಂಬಿಕೆ ಮತ್ತು ವಿಶ್ವಾಸದ ಮೇಲೆ ಗ್ರಾಮ ಮಟ್ಟದಿಂದ ನಗರ ಪ್ರದೇಶದವರೆಗೂ ಸಹಕಾರಿ ಬ್ಯಾಂಕ್‌ಗಳು ಬೆಳೆದು ನಿಂತಿವೆ. 1914-15ರ ವೇಳೆಗೆ 725 ಸಹಕಾರ ಸಂಘಗಳಲ್ಲಿ 56,267 ಸದಸ್ಯರು ಬರೊಬ್ಬರಿ ₹30.85 ಲಕ್ಷ ಬಂಡವಾಳ ಹೂಡಿದ್ದರು. ಇದರಲ್ಲಿ 661 ವ್ಯವಸಾಯ (ಕ್ರೆಡಿಟ್) ಸಹಕಾರಿ ಸಂಘಗಳಿದ್ದವು ಎಂದು ಸ್ಮರಿಸಿದರು.

ರಾಜ್ಯದಲ್ಲೇ ಇವೆ 6500ಕ್ಕೂ ಹೆಚ್ಚು ಸಹಕಾರಿಗಳು: ಇಂದು ಕರ್ನಾಟಕ ರಾಜ್ಯದಲ್ಲೇ ಸುಮಾರು 6500ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. 75 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದು, ₹51,000 ಕೋಟಿಗೂ ಹೆಚ್ಚಿನ ವ್ಯವಹಾರಗಳು ದಾಖಲಾಗಿದ್ದು, ಸಹಕಾರಿ ಕ್ಷೇತ್ರ ಭಾರತದ ಆರ್ಥಿಕತೆಗೆ ನೀಡುತ್ತಿರುವ ಕೊಡುಗೆಯನ್ನು ಇದು ನಿರೂಪಿಸಿದೆ ಎಂದು ಪ್ರತಿಪಾದಿಸಿದರು.

ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಕೃಷಿ ಪತ್ತಿನ ಸಹಕಾರ ಕ್ಷೇತ್ರಕ್ಕೆ ಬುನಾದಿ ಹಾಕಿದವರು ಎಸ್.ಎಸ್.‌ ಪಾಟೀಲ್‌. 1904ರಲ್ಲಿ ಆಗಿನ ಧಾರವಾಡ ಜಿಲ್ಲೆಯ ಗದಗ ಸಮೀಪದ ಕಣಗಿನಹಾಳ ಗ್ರಾಮದಲ್ಲಿ ಸಮಾನ ಮನಸ್ಕ ರೈತರನ್ನು ಒಗ್ಗೂಡಿಸಿ ದೇಶದ ಮೊದಲ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿ ಸಹಕಾರ ವಲಯಕ್ಕೆ ಶ್ರೀಕಾರ ಹಾಕಿದದು ಎಂದು ಸಚಿವರು ಸ್ಮರಿಸಿದರು.

ಮೊಳಹಳ್ಳಿ ಶಿವರಾವ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಚಳವಳಿಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಅನೇಕ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಮೂಲಕ ರಾಜ್ಯದಲ್ಲಿ ಸಹಕಾರ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆಂದು ಹೇಳಿದರು.

ಜಗತ್ತಿನಲ್ಲೇ ಬೃಹತ್‌ ಮಾನವ ಸಂಪನ್ಮೂಲ ಹೊಂದಿದ ರಾಷ್ಟ್ರ ಭಾರತವಾಗಿದ್ದು, ಗ್ರಾಮೀಣ ಭಾಗದ ಜನರ ಸ್ವಾವಲಂಭನೆಯಿಂದ ಭಾರತ ಇಂದು ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. 2047ರ ವೇಳೆಗೆ ಜಗತ್ತಿನ ನಂಬರ್‌ 1 ಆರ್ಥಿಕತೆಯ ರಾಷ್ಟ್ರವಾಗಿ, ವಿಕಸಿತ ಭಾರತವಾಗಿ ಹೊರಹೊಮ್ಮುವ ಪ್ರಯತ್ನದಲ್ಲಿ ಸಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿಋುವ ಭಾರತ ಇನ್ನು ಕೆಲವೇ ದಿನಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಲಿದೆ. ಇದಕ್ಕೆ ಗ್ರಾಮೀಣ ಭಾಗದ ಸಹಕಾರಿ ಕ್ಷೇತ್ರದ ಕೊಡುಗೆ ಪ್ರಮುಖವಾಗಿದೆ ಎಂದು ಅಭಿಪ್ರಾಯಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version