ಬಾಗಲಕೋಟೆ: ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ಜಾತ್ರೆಯಲ್ಲಿ ಮಾಳಿಂಗರಾಯ ಗದ್ದುಗೆಯ ತೆಂಗಿನಕಾಯಿ ದಾಖಲೆ ಮೊತ್ತಕ್ಕೆ ಹರಾಜು ಆಗಿದೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತಿಕೋಟಾ ಗ್ರಾಮದ ಭಕ್ತನರಾದ ಮಾಹಾವೀರ ಹರಕೆಯವರು ಹರಾಜಿನಲ್ಲಿ ಈ ತೆಂಗಿನಕಾಯಿಯನ್ನು 5,71,001 ರೂ.ಗೆ ಪಡೆದುಕೊಂಡರು. ಈ ತೆಂಗಿನಕಾಯಿಯನ್ನು ಪಡೆಯಲು ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಮೂವರಲ್ಲಿ ಇನ್ನಿಬ್ಬರು ಚಿಕ್ಕಲಕಿ ಗ್ರಾಮದ ಮುದುಕಪ್ಪ ಮಾಳಪ್ಪ ಪಟೇದ್ದಾರ ಮತ್ತು ಗೋಠೆ ಗ್ರಾಮದ ಸದಾಶಿವ ಮೈಗೂರರವರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು.
ತೆಂಗಿನಕಾಯಿಯ ವಿಶೇಷ : ಮಹಿಮಾಂತ ಮಾಳಿಂಗರಾಯ ದೇವರ ಗದ್ದುಗೆ ಮೇಲೆ ಈ ತೆಂಗಿನಕಾಯಿಯನ್ನು ಶ್ರಾವಣ ಮಾಸದ ಒಂದು ತಿಂಗಳ ಕಾಲ ಪೂಜಿಸಲಾಗಿರುತ್ತದೆ. ಇದೇ ಕಾಯಿಯನ್ನು ಹಿಂದೊಮ್ಮೆ ಮಾಹಾವೀರ ಹರಕೆಯವರು ಹರಾಜಿನಲ್ಲಿ 6,50,001 ರೂಪಾಯಿಗೆ ಪಡೆದುಕೊಂಡಿದ್ದರು.
ಈ ಸಂದರ್ಭದಲ್ಲಿ ಮಾಳಿಂಗರಾಯ ಪಟ್ಟದ ದೇವರು ಗುರು ಮುತ್ಯಾ ಬಬಲಾದಿ, ಮಾಳಿಂಗರಾಯ ದೇವರ ಅರ್ಚಕರಾದ ಸಿದ್ದಣ ಪೂಜಾರಿ, ಹಿರಿಯರಾದ ದುಂಡಪ್ಪ ಬಬಲಾದಿ, ಕಲ್ಲಪ್ಪ ಗಿಡಗಿಂಚಿ, ಗ್ರಾಮಪಂಚಾಯತ್ ಸದಸ್ಯರರಾದ ಬಸವರಾಜ ಆಲಗೂರ, ಸಂತೋಷ ಮಮದಾಪೂರ, ಜಾತ್ರೆಯಲ್ಲಿ ನೇರೆದಿದ್ದ ಭಕ್ತ ಸಮೂಹ ಉಪಸ್ಥಿತರಿದ್ದರು.