ಹುಬ್ಬಳ್ಳಿ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರಸಭರಿತ ಲಿಂಬೆ ಇದೀಗ ವಿಶ್ವ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ಲಿಂಬೆ ಅಭಿವೃದ್ಧಿ ಮಂಡಳಿಯ ಪ್ರಯತ್ನ ಹಾಗೂ ಬೆಂಗಳೂರಿನ ಅಪೆಡಾ ಸಂಸ್ಥೆಯ ಸಹಯೋಗದಲ್ಲಿ ಜಿಐ ಟ್ಯಾಗ್ ಪಡೆದಿರುವ ಇಂಡಿಯ ಲಿಂಬೆಯನ್ನು ಆಸ್ಟ್ರೇಲಿಯಾಗೆ ಕಳುಹಿಸಲಾಗಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಗ್ರಾಹಕರ ವ್ಯವಹಾರಗಳು, ಆಹಾರ ಹಾಗೂ ನವೀಕರಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ, ವಿಜಯಪುರದ ಇಂಡಿ ಲೈಮ್ ಹಣ್ಣು ಈಗ ವಿಶ್ವ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿರುವುದು ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.
”ವಿಜಯಪುರದ GI ಮಾನ್ಯತೆ ಪಡೆದ #Swadeshi ಇಂಡಿ ಲೈಮ್ ಹಣ್ಣು ಈಗ ವಿಶ್ವ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ಇದು ನಮ್ಮ ರೈತರ ಆದಾಯವನ್ನು ಹೆಚ್ಚಿಸುವುದಷ್ಟಲ್ಲದೇ, ರಫ್ತುಗಾರರಿಗೆ ಹೊಸ ಬಾಗಿಲುಗಳನ್ನು ತೆರೆದಿಡುತ್ತದೆ. ಈ ಮೈಲಿಗಲ್ಲು ಭಾರತದ GI ಮಾನ್ಯತೆ ಪಡೆದ ಕೃಷಿ ಪರಂಪರೆಯ ವೈಭವವನ್ನು ಪ್ರತಿಬಿಂಬಿಸಿ, ಜಾಗತಿಕ ವೇದಿಕೆಯಲ್ಲಿ ನಮ್ಮ ಉತ್ಪನ್ನಗಳ ಸಾಮರ್ಥ್ಯವನ್ನು ತೋರಿಸುತ್ತಿದೆ.” ಎಂದು ಅವರು ಬರೆದುಕೊಂಡಿದ್ದಾರೆ.
ಅಪೆಡಾ ಸಂಸ್ಥೆ ಜಿ.ಐ. ಟ್ಯಾಗ್ ಹೊಂದಿರುವ ತೋಟಗಾರಿಕೆ ಬೆಳೆಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸುವ ಅತ್ಯುತ್ತಮ ಕಾರ್ಯ ಮಾಡುತ್ತಿದ್ದು ಅದರ ಅಂಗವಾಗಿ ಇಂಡಿಯ ಲಿಂಬೆಯ ಸ್ಯಾಂಪಲ್ನ್ನು ಆಸ್ಟ್ರೇಲಿಯಾದ ಪ್ರಸಿದ್ಧ ಮಾರುಕಟ್ಟೆಗೆ ತಲುಪಿಸಿದೆ. ಇಂಡಿಯ ಲಿಂಬೆಗೆ ಆಸ್ಟ್ರೇಲಿಯಾ ಮಾರುಕಟ್ಟೆಯಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಆಸ್ಟ್ರೇಲಿಯಾದ ಗ್ರಾಹಕರು ಮನಸೋತರೆ ಪ್ರತಿ ವರ್ಷ ಇಲ್ಲಿಂದ ಆಸ್ಟ್ರೇಲಿಯಾ ಮಾರುಕಟ್ಟೆಗೆ ಇಂಡಿ ಲಿಂಬೆ ದಾಳಿ ಇಡಲಿದೆ.
ಜಿಯಾಗ್ರಾಫಿಕಲ್ ಟ್ಯಾಗ್ಲೈನ್ ದೊರೆತ ಪರಿಣಾಮವಾಗಿ ಇಂಡಿಯ ಲಿಂಬೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿದೆ. ಇದು ಆರಂಭ ಮಾತ್ರ. ಟ್ಯಾಗ್ಲೈನ್ ನೋಡಿ ಇನ್ನಿತರ ದೇಶಗಳು ಇಂಡಿ ಲಿಂಬೆಯನ್ನು ತರಿಸಿಕೊಳ್ಳಲು ಆಸಕ್ತಿ ತೋರಬಹುದಾಗಿದೆ. ಹಾಗಾಗಿದ್ದೇ ಆದಲ್ಲಿ ಇಂಡಿಯಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ ಸ್ಥಾಪಿಸಿದ್ದು ಸಾರ್ಥಕವಾಗುತ್ತದೆ. ಲಿಂಬೆ ಬೆಳೆದ ರೈತರ ಬದುಕು ಹಸನಾಗುತ್ತದೆ.
ಮಂಡಳಿಗೆ ಅನುದಾನದ ಕೊರತೆ: ಇಂಡಿ ಶಾಸಕ ಯಶವಂತ್ರಾಯಗೌಡರ ಸತತ ಪ್ರಯತ್ನದ ಫಲಿವಾಗಿ ಲಿಂಬೆ ಅಭಿವೃದ್ದಿ ಮಂಡಳಿ ಸ್ಥಾಪನೆಯಾಗಿದೆ. ಅದರ ಕೇಂದ್ರ ಕಚೇರಿಯೂ ಇಂಡಿಯಲ್ಲೇ ಇದೆ. ಆದರೆ ಸರ್ಕಾರ ಅಪೇಕ್ಷಿತ ಮಟ್ಟದಲ್ಲಿ ಈ ಮಂಡಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಮಂಡಳಿಗೆ ನೀಡಿದ ಅನುದಾನ ಬರೀ 50 ಲಕ್ಷ ರೂ. ಅಷ್ಟರಲ್ಲಿಯೇ ಅಭಿವೃದ್ಧಿ ಮಂಡಳಿ ರೈತರಿಗೆ ತರಬೇತಿ, ಇನ್ನಿತರ ತೋಟಗಾರಿಕೆ ಸಲಕರಣೆ ವಿತರಣೆ, ರೈತರಿಗೆ ಪ್ರವಾಸ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಕ್ರಿಯಾ ಯೋಜನೆ ತಯಾರಿಸಿ ಅದರಂತೆ ಕಾರ್ಯ ಮಾಡುತ್ತಿದೆ.
ಲಿಂಬೆ ಅಭಿವೃದ್ದಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಬರುವುದಕ್ಕೆ ಯಾವುದೇ ಅಧಿಕಾರಿ ತಯಾರಿಲ್ಲ. ಸದ್ಯಕ್ಕೆ ವಿಜಯಪುರ ಜಿಲ್ಲಾ ಪಂಚಾಯತ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಚ್.ಎಸ್. ಪಾಟೀಲ ಎಂಬ ಅಧಿಕಾರಿಯನ್ನು ಲಿಂಬೆ ಅಭಿವೃದ್ದಿ ಮಂಡಳಿ ಎಂ.ಡಿ. ಹುದ್ದೆಗೆ ಇನ್ಚಾರ್ಜ್ ಮಾಡಲಾಗಿದೆ. ಪಾಟೀಲರು ತುಂಬ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಸಿಬ್ಬಂದಿಯ ಕೊರತೆ.
ಆರ್ಐಡಿಎಫ್ ಅನುದಾನದ ಆಶಾಕಿರಣ: ಆರ್ಐಡಿಎಫ್ ಟ್ರ್ಯಾಂಚ್-31 ರ ಅಡಿಯಲ್ಲಿ 2025-26 ನೇ ಸಾಲಿಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿರುವ ಅನುದಾನವೇ ಲಿಂಬೆ ಅಭಿವೃದ್ದಿ ಮಂಡಳಿಗೆ ದೊಡ್ಡ ಆಶಾಕಿರಣವಾಗಿದೆ. ಈ ಕುರಿತು 2/8/2025 ರಂದು ಸರ್ಕಾರದ ಅನಧಿಕೃತ ಟಿಪ್ಪಣಿಯಲ್ಲಿ ವಿಜಯಪುರ ಲಿಂಬೆ ಅಭಿವೃದ್ದಿಗಾಗಿ ಅಂದಾಜು ಮೊತ್ತವಾದ 13 ಕೋಟಿ ರೂ. ನಲ್ಲಿ ಆರ್ಡಿಆರ್ಎಫ್ ಸಾಲವಾಗಿ 12.35 ಕೋಟಿ ರೂ. ಬರಲಿದೆ. ಇದರಲ್ಲಿ ಎಕೆಂಡರಿ ಪ್ರೊಸೆಸಿಂಗ್ ಯುನಿಟ್, ಕೋಲ್ಡ್ ಸ್ಟೋರೇಜ್, ಮಾರ್ಕೆಟ್ ಯಾರ್ಡ್, ವೇವ್ ಬ್ರಿಡ್ಜ್, ಕ್ಯಾಲಿಟಿ ಟೆಸ್ಟಿಂಗ್ ಲ್ಯಾಬ್, ಮೂಲಭೂತ ಸೌಕರ್ಯಗಳು ಹಾಗೂ ಕಟ್ಟಡ ನಿರ್ಮಿಸಲು ಯೋಜನೆ ಸಿದ್ಧವಾಗಿದೆ.